ಮುಂಬೈ: ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ಅವರು ಇತ್ತೀಚೆಗೆ ಶಿವಸೇನೆ ಪಕ್ಷ ಸೇರಿದ್ದು ಗೊತ್ತೇ ಇದೆ. ಪಕ್ಷ ಸೇರಿದ ಬೆನ್ನಲ್ಲೇ ಅವರು 3 ಕೋಟಿ ರೂಪಾಯಿ ಮೌಲ್ಯದ ಕಚೇರಿಯನ್ನು ಮುಂಬೈನಲ್ಲಿ ಖರೀದಿಸಿದ್ದಾರೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಟೀಕೆ-ಟಿಪ್ಪಣಿಗಳು ಕೇಳಿ ಬರುತ್ತಿವೆ. ರಾಜಕೀಯ ಪಕ್ಷದಿಂದ ದುಡ್ಡು ಪಡೆದು ಅವರು ಈ ಆಫೀಸ್ ಖರೀದಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಮಾತಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಎಸ್. ನಾರಾಯಣ್ಗೆ ಲಾಕ್ಡೌನ್ ವರವಾಯಿತಂತೆ … ಯಾಕೆ?
ಇಷ್ಟೇ ಆಗಿದ್ದರೆ ಪರವಾಗಿಲ್ಲ, ಕಂಗನಾ ರಣಾವತ್ ಸಹ ಇದಕ್ಕೆ ಸ್ವಲ್ಪ ತುಪ್ಪ ಸುರಿದಿದ್ದಾರೆ. ಈ ಕುರಿತು ಟಾಂಟ್ ಕೊಟ್ಟಿರುವ ಕಂಗನಾ, “ಉರ್ಮಿಳಾ ಜೀ, ನಾನು ಕಷ್ಟಪಟ್ಟು ದುಡಿದ ಹಣದಲ್ಲಿ ಖರೀದಿಸಿದ್ದ ಕಚೇರಿಯನ್ನು ಕಾಂಗ್ರೆಸ್ ನಾಶ ಮಾಡಿತು. ಬಿಜೆಪಿ ಮನವೊಲಿಸಲು ಹೋಗಿದ್ದಕ್ಕೆ ನನಗೆ ಸಿಕ್ಕಿದ್ದು, 25-30 ಕೇಸುಗಳು. ನಾನು ನಿಮ್ಮಷ್ಟೇ ಜಾಣೆಯಾಗಿದ್ದರೆ ಕಾಂಗ್ರೆಸ್ಗೆ ಖುಷಿ ಪಡಿಸುತ್ತಿದ್ದೆ. ನಾನದೆಷ್ಟು ಮೂರ್ಖಳು? ” ಎಂದು ಟ್ವೀಟ್ ಮಾಡಿದ್ದಾರೆ.
ಕಂಗನಾ ಅವರ ಈ ಟ್ವೀಟ್ ನೋಡಿ ಸಿಟ್ಟಾಗಿರುವ ಊರ್ಮಿಳಾ, ಅದಕ್ಕೆ ಸರಿಯಾದ ಉತ್ತರ ಕೊಟ್ಟಿದ್ದಾರೆ. ಈ ವಿಷಯವಾಗಿ ಟ್ವೀಟ್ ಮಾಡಿರುವ ಅವರು, ‘ನನ್ನ ಬಗ್ಗೆ ನಿಮಗಿರುವ ಅಭಿಪ್ರಾಯದ ಬಗ್ಗೆ ಥ್ಯಾಂಕ್ಸ್. ಚಿತ್ರರಂಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಕೆಲಸ ಮಾಡಿದ ನಂತರ 2011ರಲ್ಲಿ ಮುಂಬೈನ ಅಂಧೇರಿಯಲ್ಲಿ ಒಂದು ಮನೆ ಖರೀದಿಸಿದೆ. ಆ ಮನೆಯನ್ನು ಮಾರ್ಚ್ ಮೊದಲ ವಾರದದಲ್ಲಿ ಮಾರಿದೆ. ಅದರಿಂದ ಬಂದ ಹಣದಿಂದ ಇನ್ನೊಂದು ಮನೆ ಖರೀದಿಸಿದ್ದೇನೆ. ಈ ಮನೆಯನ್ನು ನಾನು ರಾಜಕೀಯ ಪ್ರವೇಶಿಸುವುದಕ್ಕೆ ಮೊದಲೇ ಖರೀದಿಸಿದ್ದೆ. ಇದೆಲ್ಲಕ್ಕೂ ನನ್ನ ಬಳಿ ಪೂರಕ ಸಾಕ್ಷಿಗಳಿವೆ. ನೀವೇ ದಿನ ಮತ್ತು ಸಮಯ ನಿಗದಿ ಮಾಡಿ. ಅಲ್ಲಿ ಬಂದು ಎಲ್ಲಾ ದಾಖಲೆಗಳನ್ನೂ ತೋರಿಸುತ್ತೇನೆ’ ಎಂದು ಊರ್ಮಿಳಾ ಹೇಳಿಕೊಂಡಿದ್ದಾರೆ.
ಜತೆಗೆ ಕಂಗನಾಗೆ ಸವಾಲು ಹಾಕಿರುವ ಊರ್ಮಿಳಾ, ‘ಅದಕ್ಕೆ ಬದಲಿಯಾಗಿ, ನಿಮ್ಮಿಂದಲೂ ಕೆಲವು ದಾಖಲೆಗಳನ್ನು ಬಯಸುತ್ತೇನೆ. ನಮ್ಮಂತಹ ಕೋಟ್ಯಂತರ ತೆರಿಗೆದಾರರ ಹಣದಿಂದ ನಿಮಗೆ ಇತ್ತೀಚೆಗೆ ವೈ ಪ್ಲಸ್ ಭದ್ರತೆ ನೀಡಲಾಯಿತು. ಏಕೆಂದರೆ, ನೀವು ಡ್ರಗ್ಸ್ ಮಾಫಿಯಾ ಕುರಿತಾಗಿ ಎನ್ಸಿಬಿಗೆ ಪೂರಕವಾದ ಮಾಹಿತಿ ಮತ್ತು ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡವರ ಹೆಸರುಗಳನ್ನು ಕೊಡುವುದಾಗಿ ಹೇಳಿದ್ದೀರಿ. ಆದರೆ, ಇದುವರೆಗೂ ಕೊಟ್ಟಿಲ್ಲ. ನೀವು ಬರುವಾಗ ಆ ಪಟ್ಟಿಯನ್ನೂ ತನ್ನಿ. ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ. ಅಲ್ಲಿಯವರೆಗೂ ಜೈ ಹಿಂದ್, ಜೈ ಮಹಾರಾಷ್ಟ್ರ ಮತ್ತು ಗಣಪತಿ ಬಪ್ಪ ಮೋರೆಯಾ’ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ‘ಚಂದ್ರ ಚಕೋರಿ’ಯಲ್ಲಿ ಶ್ರೀಮುರಳಿ ಬದಲು ಆದಿತ್ಯ ನಟಿಸಬೇಕಿತ್ತಂತೆ …
ಊರ್ಮಿಳಾ ಅವರ ಈ ಸವಾಲಿಗೆ, ಕಂಗನಾ ಕಡೆಯಿಂದ ಯಾವ ಉತ್ತರ ಬರುತ್ತದೋ ಎಂಬ ಕುತೂಹಲ ಎಲ್ಲರಲ್ಲೂ ಇದೆ.