ನವದೆಹಲಿ: ದೇಶಾದ್ಯಂತ ಎರಡನೇ ಹಂತದ ಲಾಕ್ಡೌನ್ ಮೇ 3ರವರೆಗೆ ಘೋಷಿಸಲಾಗಿದೆ. ಆ ಬಳಿಕ ನಿರ್ಬಂಧಗಳನ್ನು ತೆರವು ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಆನಂತರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಸಭೆ ನಡೆಸಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಸ್ಥಗಿತಗೊಂಡಿರುವ ಸಂದರ್ಶನಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕಾದ ಹೊಣೆಗಾರಿಕೆ ಯುಪಿಎಸ್ಸಿ ಮೇಲಿದೆ. ಫೆ.13ರಿಂದ ಏಪ್ರಿಲ್ 13ರವರೆಗೆ ಅಖಿಲ ಭಾರತ ನಾಗರಿಕ ಸೇವಾ ಹುದ್ದೆಗಳ ಸಂದರ್ಶನ ನಿಗದಿ ಮಾಡಲಾಗಿತ್ತು. ಆದರೆ, ಕರೊನಾ ಲಾಕ್ಡೌನ್ ಹಿನ್ನೆಲೆ ಮಾರ್ಚ್ನಲ್ಲಿ ಸಂದರ್ಶನಗಳನ್ನು ಸ್ಥಗಿತಗೊಳಿಸಲಾಗಿತ್ತು. ಮೇ 3ರ ನಂತರ ವ್ಯಕ್ತಿತ್ವ ಪರೀಕ್ಷೆಗಳನ್ನು ಮುಂದುವರಿಸುವ ಸಾಧ್ಯತೆಗಳಿವೆ.
ಅಖಿಲ ಭಾರತ ಇಂಜಿನಿಯರಿಂಗ್ ಸೇವೆ ಹಾಗೂ ಜಿಯೋಲಾಜಿಸ್ಟ್ ಸೇವೆಗಳ ಪೂರ್ವಭಾವಿ ಪರೀಕ್ಷೆಗಾಗಿ ದಿನಾಕ ಪ್ರಕಟಿಸಲಾಗಿದ್ದು, ಇದನ್ನು ಮರುನಿಗದಿಪಡಿಸಿದಲ್ಲಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು ಎಂದು ಯುಪಿಎಸ್ಸಿ ತಿಳಿಸಿದೆ.
ಇದಲ್ಲದೆ, ಭಾರತೀಯ ಅರ್ಥಶಾಸ್ತ್ರ ಸೇವೆ, ಲೆಕ್ಕಶಾಸ್ತ್ರ ಸೇವೆ ಹಾಗೂ ಕಂಬೈನ್ಡ್ ಮೆಡಿಕಲ್ ಸರ್ವೀಸ್ ಹಾಗೂ ಸಿಎಪಿಎಫ್ನ ಅಸಿಸ್ಟೆಂಟ್ ಕಮಾಡೆಂಟ್ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ಅಧಿಸೂಚನೆ ಹೊರಡಿಸುವುದನ್ನು ಯುಪಿಎಸ್ಸಿ ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ.
ನೇರ ನೇಮಕಾತಿ ಮೂಲಕ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದನ್ನು ಮುಂದೂಡಲಾಗಿದೆ. ಈ ಎಲ್ಲ ಚಟುವಟಿಕೆಗಳಿಗೆ ದಿನ ನಿಗದಿ ಮಾಡಬೇಕಿದೆ. ಜತೆಗೆ, ಇದರಿಂದ ಮುಂಬರುವ ಪರೀಕ್ಷೆ ಅಥವಾ ನೇಮಕಾತಿ ಪ್ರಕ್ರಿಯೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆಯೂ ಯುಪಿಎಸ್ಸಿಗಿದೆ.