ಉಪ್ಪಿನಬೆಟಗೇರಿ: ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂಬ ಆರೋಪ ವಿದ್ಯಾರ್ಥಿಗಳಿಂದ ಕೇಳಿ ಬಂದಿದೆ. ಅಲ್ಲದೆ, ಈ ಹಾಸ್ಟೆಲ್ನಲ್ಲಿ ವಾರ್ಡ್ನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರು ಬಹಳ ದಿನಗಳಿಂದ ಚಾಲ್ತಿಯಲ್ಲಿದೆ.
ಹಾಸ್ಟೆಲ್ನಲ್ಲಿ ಊಟಕ್ಕೆಂದು ಎರಡೂ ಹೊತ್ತು ಚಪಾತಿ ನೀಡಲಾಗುತ್ತದೆ. ಚಪಾತಿ ಸರಿಯಾಗಿ ಬೆಂದಿರದೆ ಕಳಪೆಯಾಗಿರುತ್ತದೆ. ಜತೆಗೆ ಸೇವಿಸಲು ಯೋಗ್ಯವಲ್ಲದ (ಬಲಿತ) ತರಕಾರಿ ತಂದು ಪಲ್ಯೇ ಮಾಡುತ್ತಾರೆ. ಬೆಳಗಿನ ಟಿಫಿನ್ಗೆ ಮಾಡುವ ಅವಲಕ್ಕಿಗೆ ಸರಿಯಾಗಿ ಅಡುಗೆ ಎಣ್ಣೆ ಬಳಸುವುದಿಲ್ಲ. ನಿತ್ಯ ಈ ರೀತಿಯ ಕಳಪೆ ಆಹಾರ ತಿಂದು ಸಾಕಾಗಿದೆ. ಈ ಸಮಸ್ಯೆಗಳನ್ನು ವಾರ್ಡ್ನ್ ಬಳಿ ಹೇಳಬೇಕೆಂದರೆ ಅವರು 15 ದಿನಕ್ಕೊಮ್ಮೆ ಬಂದು ಹೋಗುತ್ತಾರೆ ಎಂದು ಸಮಸ್ಯೆಗಳ ಬುತ್ತಿಯನ್ನೇ ಬಿಚ್ಚಿಡುತ್ತಿದ್ದಾರೆ ಹಾಸ್ಟೆಲ್ ವಿದ್ಯಾರ್ಥಿಗಳು.
ಅಡುಗೆ ಸಹಾಯಕರು ತಂಬಾಕು, ಗುಟ್ಕಾ ಸೇವನೆ ಮಾಡಿ ಊಟ ಮಾಡುವ ಕೋಣೆಯ ಬಾಗಿಲ ಬಳಿ ಉಗುಳುತ್ತಿದ್ದು, ಇಂಥ ಸಮಸ್ಯೆಗಳನ್ನು ಯಾರ ಬಳಿ ಹೇಳಬೇಕು ಎಂಬುದೇ ತಿಳಿಯದಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸರಿಯಾಗಿ ಆರೋಗ್ಯ ತಪಾಸಣೆ ನಡೆಸುವುದಿಲ್ಲ. ಹೀಗಾಗಿ ಕೆಲವು ಸಲ ಖಾಸಗಿ ವೈದ್ಯರ ಬಳಿ ಹೋಗಿ ಹಣ ನೀಡಿ ವೈದ್ಯೋಪಚಾರ ಮಾಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಗಲಕೋಟೆ, ಕಲಬುರಗಿ, ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳ ಸುಮಾರು 100 ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿ ಪ್ರವೇಶ ಪಡೆದಿದ್ದಾರೆ.
ಧಾರವಾಡ, ಅಳ್ನಾವರ ಹಾಸ್ಟೆಲ್ನಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿದ್ದು, ಉಪ್ಪಿನಬೆಟಗೇರಿ ಹಾಸ್ಟೆಲ್ಗೆ ಹೆಚ್ಚುವರಿಯಾಗಿ ನಿಯೋಜನೆಗೊಂಡಿದ್ದೇನೆ. ಹಾಸ್ಟೆಲ್ನಲ್ಲಿ ಊಟ, ಕುಡಿಯುವ ನೀರು ಸೇರಿ ಇತರ ಸಮಸ್ಯೆಗಳಿದ್ದರೆ ವಿದ್ಯಾರ್ಥಿಗಳು ನನ್ನ ಗಮನಕ್ಕೆ ತರುವುದಿಲ್ಲ. ಹೀಗಾಗಿ ಕೆಲವು ಸಮಸ್ಯೆಗಳಾಗಿರಬಹುದು. ಜತೆಗೆ ಅಡುಗೆ ಸಹಾಯಕರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಬಗ್ಗೆ ಮಾಹಿತಿಯಿದ್ದು, ಅದನ್ನು ಸರಿ ಪಡಿಸಲಾಗುವುದು.
ಪ್ರಸನ್ನ ಅಂಗಡಿ ಉಪ್ಪಿನಬೆಟಗೇರಿ
ಬಿಸಿಎಂ ಹಾಸ್ಟೆಲ್ ವಾರ್ಡ್ನ್
ವಿದ್ಯಾರ್ಥಿಗಳ ವಿರುದ್ಧ ಆರೋಪ
ಹಾಸ್ಟೆಲ್ಗೆ ಪ್ರವೇಶ ಪಡೆದ ಕೆಲ ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿ ಜತೆ ಸರಿಯಾಗಿ ವರ್ತಿಸುವುದಿಲ್ಲ. ರಾತ್ರಿ ವೇಳೆ ವಸತಿ ನಿಲಯದಲ್ಲಿ ಗಲಾಟೆ ಮಾಡುತ್ತಾರೆ ಎಂದು ಹಾಸ್ಟೆಲ್ ಸುತ್ತಲಿನ ನಿವಾಸಿಗಳು ವಿದ್ಯಾರ್ಥಿಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ.