ಅಥಣಿ: ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜೂ.5ರಿಂದ ಮುಂದಿನ ಭಾನುವಾರದವರೆಗೆ ಪಟ್ಟಣದ ಎಲ್ಲ ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವಂತೆ ಶಾಸಕ ಮಹೇಶ ಕುಮಠಳ್ಳಿ ಎಲ್ಲ ವ್ಯಾಪಾರಸ್ಥರಲ್ಲಿ ಮನವಿ ಮಾಡಿದರು.
ಶನಿವಾರ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಪಟ್ಟಣದ ಎಲ್ಲ ವ್ಯಾಪಾರಸ್ಥರು, ಅಧಿಕಾರಿಗಳ, ಸಾರ್ವಜನಿಕರ ಸಭೆ ನಡೆಸಿ ಮಾತನಾಡಿ, ಕರೊನಾದಿಂದಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಪರಿಸ್ಥಿತಿ ಹಿಗೇಯೇ ಮುಂದವರಿದರೆ ಭವಿಷ್ಯ ಘೋರವಾಗಿರಲಿದೆ. ವ್ಯಾಪಾರ ಬಂದ್ ಮಾಡುವುದರಿಂದ ಸೋಂಕು ಹರಡುವಿಕೆಯನ್ನು ತಡೆಯಬಹುದು. ಆದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು. ಅಥಣಿಯಲ್ಲಿ ಕೋವಿಡ್ ಟೆಸ್ಟ್ ಲ್ಯಾಬ್ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ಅವರಿಗೆ ಸೂಚಿಸಿದರು. ಕರೊನಾ ಸೇನಾನಿಗಳ ಕಾರ್ಯ ಸ್ಮರಿಸಿ, ಎಚ್ಚರದಿಂದ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು.
ತಹಸೀಲ್ದಾರ್ ದುಂಡಪ್ಪ ಕೋಮಾರ ಮಾತನಾಡಿ, ಹೊರ ರಾಜ್ಯದಿಂದ ಬಂದ 19ಜನ ಹೋಂ ಕ್ವಾರಂಟೈನ್ಲ್ಲಿದ್ದಾರೆ. ಕರೊನಾದಿಂದಾಗಿ 7 ಜನ ಮೃತಪಟ್ಟಿದ್ದಾರೆ. ಮೃತರ ಸಂಬಂಧಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಕರೊನಾದಿಂದ ಸಾವನ್ನಪ್ಪುವವರ ಮಾಹಿತಿ ನೀಡಬೇಕು. ಈ ಹಿಂದೆ ಮಾಹಿತಿ ನೀಡದೇ ಮಣ್ಣು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದುರು. ಕಿರಣಕುಮಾರ ಪಾಟೀಲ, ಸಿಪಿಐ ಶಂಕರಗೌಡ ಬಸನಗೌಡರ, ಪುರಸಭೆ ಮುಖ್ಯಾಧಿಕಾರಿ ಎಂ.ಎಸ್.
ಕವಲಾಪುರ, ಆರೋಗ್ಯ ಅಧಿಕಾರಿ ಎಂ.ಎಸ್.ಕೊಪ್ಪದ, ಪಿಎಸ್ಐ ಕುಮಾರ ಹಾಡಕಾರ, ತಾಪಂ ಇಒ ರವಿ ಬಂಗಾರೆಪ್ಪನವರ ಇದ್ದರು.