ಲಖನೌ: ವ್ಯಕ್ತಿಯೊಬ್ಬ ತನ್ನ ಪತ್ನಿಯ ರುಂಡವನ್ನು ಕತ್ತರಿಸಿ ಕೈಯಲ್ಲಿ ಹಿಡಿದುಕೊಂಡು ಪೊಲೀಸ್ ಠಾಣೆಗೆ ಹೋಗಿ ಶರಣಾಗಿರುವ ಆತಂಕಕಾರಿ ಘಟನೆ ಉತ್ತರ ಪ್ರದೇಶ ಬಾರಾಬಂಕಿಯಲ್ಲಿ ಶನಿವಾರ ನಡೆದಿದೆ.
ಆರೋಪಿಯನ್ನು ಅಖಿಲೇಶ್ ಯಾದವ್ ಎಂದು ಗುರುತಿಸಲಾಗಿದೆ. ಬಾರಾಬಂಕಿಯ ಜಹಂಗೀರ್ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಹದರ್ಪುರ್ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯ ಜಗಳ ವಿಕೋಪಕ್ಕೆ ತಿರುಗಿ ಉದ್ರಿಕ್ತಗೊಂಡ ಆರೋಪಿ ತನ್ನ ಪತ್ನಿಯ ರುಂಡವನ್ನೇ ಕತ್ತರಿಸಿದ್ದಾನೆ. ಬಳಿಕ ಅದನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ತೆರಳಿದ್ದಾನೆ.
ಬಳಿಕ ಆರೋಪಿಯಿಂದ ಪತ್ನಿಯ ರುಂಡವನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದಾಗ, ಆರೋಪಿ ತಕ್ಷಣ ರಾಷ್ಟ್ರಗೀತೆ ಮತ್ತು ಭಾರತ್ ಮಾತಾ ಕೀ ಜೈ ಎನ್ನಲು ಶುರು ಮಾಡಿದ್ದಾನೆ. ಇದನ್ನು ಕೇಳಿದ ಪೊಲೀಸರು ಒಂದು ಕ್ಷಣ ತಬ್ಬಿಬ್ಬಾಗಿ ನಿಂತುಕೊಂಡ ಪ್ರಸಂಗ ಜರುಗಿದೆ.
ಬಳಿಕ ಪೊಲೀಸರು ಮತ್ತು ಆರೋಪಿಯ ನಡುವೆ ಕೆಲಕಾಲ ಜಗಳ ಉಂಟಾಗಿ, ಕೊನೆಗೂ ಆತನಿಂದ ರುಂಡವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಈ ಘಟನೆ ಪೊಲೀಸ್ ಠಾಣಾ ವ್ಯಾಪ್ತಿಯನ್ನು ಆತಂಕಕ್ಕೆ ದೂಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)