ಹಮೀರ್ಪುರ: ಪಟಾಕಿ ಚೀಲದ ಮೇಲೆ ಜೀಪ್ ಚಲಾಯಿಸಲೆತ್ನಿಸಿದ್ದ ಪರಿಣಾಮ ಭೀಕರ ಸ್ಫೋಟ ಉಂಟಾಗಿ ಆ ಜೀಪ್ ಬಾನೆತ್ತರಕ್ಕೆ ಚಿಮ್ಮಿ ಕೆಳಕ್ಕೆ ಬಿದ್ದ ಪರಿಣಾಮ ಆರು ಜನ ಗಾಯಗೊಂಡಿದ್ದಾರೆ. ಅಲ್ಲಿದ್ದ ನಾಲ್ಕು ವಾಹನಗಳು ಜಖಂ ಆಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಮೀರ್ಪುರದಲ್ಲಿ ಮಂಗಳವಾರ ಅಪರಾಹ್ನ ಈ ದುರಂತ ಸಂಭವಿಸಿದ್ದು, ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: 1.25 ಲಕ್ಷ ಕೋಟಿ ರೂಪಾಯಿ – ಸೈಬರ್ ಕ್ರೈಂನಿಂದಾಗಿರುವ ನಷ್ಟ: ಇನ್ನೂ ಹೆಚ್ಚಾಗಲಿದೆಯಂತೆ ಅಪರಾಧ!
ಸ್ಫೋಟಕ್ಕೆ ಕಾರಣವೇನು ಎಂದು ಪರಿಶೀಲಿಸಲು ಫಾರೆನ್ಸಿಕ್ ಪರಿಣತರು ಸ್ಥಳಕ್ಕಾಗಮಿಸಿದ್ದು, ಮೇಲ್ನೋಟಕ್ಕೆ ಜೀಪ್ ಪಟಾಕಿ ಚೀಲದ ಮೇಲೇರಿದ್ದೇ ಕಾರಣ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)