ಲಖನೌ : ಕಳೆದ ತಿಂಗಳು ಅಸ್ಸಾಂ ಸಿಎಂ ಹಿಮಂತ ಬಿಸ್ವ ಸರ್ಮ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಎರಡು ಮಕ್ಕಳ ನೀತಿಯನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಿದ್ದರು. ಇದೀಗ ಉತ್ರರಪ್ರದೇಶ ಸರ್ಕಾರವೂ ಇದೇ ದಾರಿಯಲ್ಲಿ ಹೆಜ್ಜೆ ಇಟ್ಟಿದೆ. ರಾಜ್ಯದ ಲಾ ಕಮಿಷನ್, ಪ್ರಸ್ತಾವಿತ ಜನಸಂಖ್ಯಾ ನಿಯಂತ್ರಣ ಮಸೂದೆಯ ಮೊದಲನೇ ಕರಡುಪ್ರತಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ಈ ಮಸೂದೆಯಲ್ಲಿ ಒಂದೆಡೆ ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಜನರಿಗೆ ಸರ್ಕಾರಿ ಸೌಕರ್ಯಗಳನ್ನು ನಿರ್ಬಂಧಿಸಿದರೆ, ಮತ್ತೊಂದೆಡೆ, ಎರಡು ಮಕ್ಕಳ ನೀತಿಯನ್ನು ಪಾಲಿಸುವವರಿಗೆ ವಿಶೇಷ ಸವಲತ್ತುಗಳನ್ನು ನೀಡುವ ಪ್ರಸ್ತಾವನೆ ಮಾಡಲಾಗಿದೆ. ಎರಡು ಮಕ್ಕಳ ನೀತಿಯನ್ನು ಉಲ್ಲಂಘಿಸುವವರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವುದನ್ನು ಅಥವಾ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದನ್ನು ತಡೆಯಲು ಪ್ರಸ್ತಾಪಿಸಲಾಗಿದೆ. ಪಡಿತರ ಚೀಟಿ ಘಟಕಗಳನ್ನು ಕೂಡ ನಾಲ್ಕಕ್ಕೆ ಸೀಮಿತಗೊಳಿಸುತ್ತದೆ ಎಂದು ಯುಪಿ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎ.ಎನ್.ಮಿತ್ತಲ್ ತಿಳಿಸಿದ್ದಾರೆಂದು ಇಂಡಿಯಾ ಟುಡೆ ಟಿವಿ ವರದಿ ಮಾಡಿದೆ.
ಎರಡು ಮಕ್ಕಳ ನೀತಿ ಪಾಲಿಸುವ ಸರ್ಕಾರಿ ನೌಕರರಿಗೆ ಹೆಚ್ಚುವರಿ ಇಂಕ್ರಿಮೆಂಟುಗಳು ಮತ್ತು ನಿವೇಶನ ಖರೀದಿಗೆ ರಿಯಾಯಿತಿ ಅವಕಾಶಗಳನ್ನು ಸೂಚಿಸಿದ್ದರೆ, ಖಾಸಗಿ ವಲಯದವರಿಗೆ ನೀರಿನ ಬಿಲ್, ವಿದ್ಯುತ್ ಬಿಲ್, ಹೋಮ್ ಲೋನ್ ಮುಂತಾದವುಗಳಲ್ಲಿ ರಿಯಾಯಿತಿಗಳನ್ನು ಒದಗಿಸಲಾಗುವುದು ಎನ್ನಲಾಗಿದೆ.
ಮಸೂದೆಯ ಮೇಲೆ ಸಾರ್ವಜನಿಕರ ಸಲಹೆಗಳನ್ನು ಆಹ್ವಾನಿಸಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ 2021-2030ಕ್ಕೆ ಹೊಸ ಜನಸಂಖ್ಯಾ ನೀತಿಯನ್ನು ಘೋಷಿಸುವುದಕ್ಕೆ ಎರಡು ದಿನಗಳ ಮುಂಚೆ ಈ ಕರಡು ಮಸೂದೆ ಬಿಡುಗಡೆಯಾಗಿದೆ. ಆದಿತ್ಯನಾಥ್ ಅವರು ಭಾನುವಾರ ನೀತಿಯನ್ನು ಬಿಡುಗಡೆ ಮಾಡಲಿದ್ದಾರೆ. (ಏಜೆನ್ಸೀಸ್)