ಹೊಸಪೇಟೆ: ಹಳೇಮಲಪನಗುಡಿ ಗ್ರಾಮದ ತಾಯಮ್ಮನ ಗುಡಿ ಹತ್ತಿರ ಅನಧಿಕೃತವಾಗಿ ಮಸೀದಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ತಾಲೂಕು ಹಿಂದು ಜಾಗರಣ ವೇದಿಕೆ ಮತ್ತು ಮಲಪನಗುಡಿ ನಾಗರಿಕ ಬಳಗ ಮಂಗಳವಾರ ಗ್ರೇಡ್ 2 ತಹಸೀಲ್ದಾರ್ ಅಮರನಾಥ್ಗೆ ಮನವಿ ಸಲ್ಲಿಸಿತು.
ಕೇವಲ ಬೆರಳೆಣಿಕೆ ಮುಸ್ಲಿಂ ಮನೆಗಳಿರುವ ಸ್ಥಳದಲ್ಲಿ ನಿಯಮಬಾಹಿರವಾಗಿ ಮಸೀದಿ ನಿರ್ಮಿಸಲಾಗುತ್ತಿದೆ. ಕಾಮಗಾರಿ ಆರಂಭದಲ್ಲಿ ಕೇಳಿದಾಗ ಶಾಲೆ ನಿರ್ಮಿಸಲಾಗುತ್ತಿದೆ ಎಂದಿದ್ದರು. ಈಗ ಮಸೀದಿ ನಿರ್ಮಿಸಲಾಗುತ್ತಿದೆ. ಸಮೀಪದ ಕೊಂಡನಾಯಕನಹಳ್ಳಿ, ಹೊಸ ಮಲಪನಗುಡಿಗಳಲ್ಲಿ ದೊಡ್ಡ ಮಸೀದಿಗಳಿದ್ದರೂ ಇಲ್ಲಿ ಮಸೀದಿ ನಿರ್ಮಿಸುತ್ತಿರುವುದು ಸ್ಥಳೀಯರಿಗೆ ತೊಂದರೆಯಾಗಲಿದೆ. ನಮಾಜ್ ವೇಳೆ ಅತಿಹೆಚ್ಚು ಶಬ್ಧ ಮಾಡುವುದರಿಂದ ಮಕ್ಕಳು, ಗರ್ಭಿಣಿಯರಿಗೆ ಸಮಸ್ಯೆಯಾಗಲಿದೆ. ಅಲ್ಲದೆ ಶೇ.80 ಅಧಿಕ ಹಿಂದು ಜನರು ವಾಸಿಸುವ ಸ್ಥಳದಲ್ಲಿ ಮಸೀದಿ ಕಟ್ಟುವಂತಿಲ್ಲ ಎಂಬ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಲಾಗಿದೆ. ಆದ್ದರಿಂದ ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ ಕಟ್ಟಡ ತೆರವುಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂಘಟನೆಗಳ ಮುಖಂಡರಾದ ಗಣೇಶ್ ನೀರ್ಲಿಗಿ, ಮೌನೇಶ್ ಬಡಿಗೇರ್, ಬಿ.ನವೀನ್ ಕುಮಾರ್, ಹಳೇ ಮಲಪನಗುಡಿ ಗ್ರಾಪಂ ಸದಸ್ಯ ಬಿ.ತಾಯಪ್ಪ, ಗ್ರಾಮದ ಮುಖಂಡರಾದ ಕುರಟ್ಟಿ ವಾಸಪ್ಪ, ಕೆ.ಭರ್ಮಪ್ಪ, ಬಿ.ರಮೇಶ್, ಕುರಟ್ಟಿ ಬೀರಪ್ಪ, ಮಠದ ಈಶ್ವರಯ್ಯ, ತಾಪಂ ಮಾಜಿ ಸದಸ್ಯ ಬಿ.ಶಂಕ್ರಪ್ಪ ಇತರಿದ್ದರು.