ಗೋಕಾಕ: ಗೋಕಾಕ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಾಯ- ಸಹಕಾರ ನೀಡುತ್ತೇನೆ ಎಂದು ಕೆಎಂಎ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಗೋಕಾಕ ತಾಲೂಕು ಒಕ್ಕಲುತನ ಸಂಘದ ಮಂಡಳಿ ಸದಸ್ಯರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು. ರೈತರ ಅಭ್ಯುದಯಕ್ಕಾಗಿ ಸರ್ಕಾರ ಜಾರಿಗೆ ಮಾಡಿರುವ ಎಲ್ಲ ಯೋಜನೆಗಳನ್ನು ಮುಟ್ಟಿಸುವ ಜವಾಬ್ದಾರಿ ಸದಸ್ಯರ ಹೆಗಲ ಮೇಲಿದೆ.
ಗೋಕಾಕ ಮತ್ತು ಮೂಡಲಗಿ ತಾಲೂಕಿನ ಸಮಸ್ತ ರೈತರು ಹಾಗೂ ಸಂಘದ ಸದಸ್ಯರ ಸಹಕಾರದಿಂದ ಅವಿರೋಧವಾಗಿ ಆಯ್ಕೆ ನಡೆದಿದೆ. ಒಕ್ಕಲುತನ ಸಂಘವು ರೈತರಿಗೆ ಸೇರಿದ್ದು. ಇಲ್ಲಿ ಪಕ್ಷ ಮುಖ್ಯವಲ್ಲ. ಸಹಕಾರಿ ತತ್ವದಡಿ ಸಂಘವು ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಸಂಘ ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ ಉಳಿಸಿಕೊಂಡು ಹೋಗುತ್ತೇನೆ ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಆಡಳಿತ ಮಂಡಳಿಯ ಸದಸ್ಯರು ಸತ್ಕರಿಸಿದರು.
ಸಂಘದ ಆಡಳಿತ ಮಂಡಳಿಗೆ ನೂತನವಾಗಿ ಆಯ್ಕೆಯಾಗಿರುವ ಅಶೋಕ ನಾಯಿಕ, ವಿಠ್ಠಲ ಪಾಟೀಲ, ಸುಭಾಷ ಢವಳೇಶ್ವರ, ಬಸಗೌಡ ಪಾಟೀಲ ಮೆಳವಂಕಿ, ಎಸ್.ಎಸ್.ಪಾಟೀಲ, ಬಸಪ್ಪ ಕುರಿಬಾಗಿ, ಮಹಾಂತೇಶ ಅವರಗೋಳ, ಮುತ್ತೆಪ್ಪ ಜಲ್ಲಿ, ಸಿದ್ದಪ್ಪ ಹಮ್ಮನವರ, ಗಂಗವ್ವ ಜೈನ, ಲುಬನಾ ದೇಸಾಯಿ, ವೆಂಕನಗೌಡ ಪಾಟೀಲ, ಪ್ರಭಾಕರ ಬಂಗೆನ್ನವರ, ಸುರೇಶ ಗುಡ್ಡಾಕಾರ ಇತರರಿದ್ದರು.