ನವದೆಹಲಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಒತ್ತಾಯಿಸಿದ್ದಾರೆ. ಗುರುವಾರ ಈ ಕುರಿತು ತಮ್ಮ ಆರ್ಪಿಐ ಪಕ್ಷದ ವತಿಯಿಂದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಅವರು, ಮಹಾರಾಷ್ಟ್ರದಲ್ಲಿ ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿಯಾಗಬೇಕು ಎಂದು ಎಎನ್ಐ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರ ಮೇಲೆ ಕೇಳಿ ಬಂದಿರುವ 100 ಕೋಟಿ ರೂಪಾಯಿ ಲಂಚದ ಆರೋಪದ ಬಗ್ಗೆ ಯಾವುದೇ ತನಿಖಾ ಸಂಸ್ಥೆ ನೇಮಿಸುವ ಬದಲು ಭ್ರಷ್ಟಾಚಾರದಲ್ಲಿ ಮುಳುಗಿರುವ ಮಹಾರಾಷ್ಟ್ರ ಸರ್ಕಾರವನ್ನು ಕಿತ್ತೊಗೆದು ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸಿಎಂ ಮನೆ ಮುಂದೆ ಹೈಡ್ರಾಮ! ಸೀರೆ ಬಿಚ್ಚಿಹೋಗಿದೆ ಬಿಟ್ಬಿಡಿ… ಪೊಲೀಸರು ಕಕ್ಕಾಬಿಕ್ಕಿ
ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆಯಾಗಿದ್ದರ ಪ್ರಕರಣವನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಆರೋಪಿಸಿ ಮುಂಬೈ ಪೊಲೀಸ್ ಆಯುಕ್ತರಾಗಿದ್ದ ಪರಮ್ ಬೀರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಅವರನ್ನು ಮಹಾರಾಷ್ಟ್ರ ಗೃಹ ರಕ್ಷಕ ದಳದ ಮುಖ್ಯಸ್ಥರಾಗಿ ವರ್ಗಾಯಿಸಲಾಗಿತ್ತು.
ಇದರ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದು ಆರೋಪ ಮಾಡಿದ್ದ ಪರಮ್ ಬೀರ್ ಸಿಂಗ್, ‘ಒಂದು ತಿಂಗಳಿಗೆ ನೂರು ಕೋಟಿ ರೂ ಲಂಚ ಸಂಗ್ರಹಿಸುವಂತೆ ಗೃಹ ಸಚಿವ ಅನಿಲ್ ದೇಶಮುಖ್ ಅವರು ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರಿಗೆ ಸೂಚನೆ ನೀಡಿದ್ದರು. ಈ ಗುರಿ ತಲುಪಲು ಮುಂಬೈನಲ್ಲಿ 1750 ಬಾರ್ ರೆಸ್ಟೋರಂಟ್ಗಳಿವೆ. ಸರಿಯಾಗಿ ಕೆಲಸ ಮಾಡಿದರೆ 100 ಕೋಟಿ ಬರುತ್ತೆ. ಪ್ರತಿಯೊಂದರಿಂದಲೂ 2 ರಿಂದ 3 ಲಕ್ಷ ಸಂಗ್ರಹಿಸಿದರೆ 45 ರಿಂದ 50 ಕೋಟಿ ರೂಪಾಯಿ ಆಗುತ್ತದೆ. ಉಳಿದಿದ್ದನ್ನು ಇನ್ನಿತರ ಮೂಲಗಳಿಂದ ಸಂಗ್ರಹಿಸಬಹುದು ಎಂದು ವಾಜೆಗೆ ಸೂಚನೆ ನೀಡಿದ್ದರು’ ಎಂದು ಪತ್ರದಲ್ಲಿ ಸಿಂಗ್ ಉಲ್ಲೇಖಿಸಿದ್ದರು.
ಪರಮ್ ಬೀರ್ ಸಿಂಗ್ 100 ಕೋಟಿ ಹೇಳಿಕೆ: ‘ಮಹಾ’ ರಾಜಕಾರಣದಲ್ಲಿ ಎದ್ದಿದೆ ಮಹಾ ಬಿರುಗಾಳಿ! ಫುಲ್ ಡಿಟೈಲ್ಸ್ ಇಲ್ಲಿದೆ ನೋಡಿ