ನವದೆಹಲಿ: ನಿರ್ಮಾಣ ಹಂತದ ಕಟ್ಟಡ ಕುಸಿದಿದ್ದು, ಸಿಲುಕಿಕೊಂಡಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ದೆಹಲಿಯ ಸತ್ಯನಿಕೇತನ ಏರಿಯಾದಲ್ಲಿ ಸೋಮವಾರ ಏಕಾಏಕಿ ನಿರ್ಮಾಣ ಹಂತದ ಕಟ್ಟಡ ಕುಸಿದಿದೆ. ಸುದ್ದಿ ತಿಳಿದ ಕೂಡಲೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಟ್ಟಡದೊಳಗೆ ಸಿಲುಕಿರುವವರ ರಕ್ಷಣೆಯಲ್ಲಿ ತೊಡಗಿದೆ.
ಸೋಮವಾರ ಮಧ್ಯಾಹ್ನ 1.24ರ ಸುಮಾರಿಗೆ ಕಟ್ಟಡ ಕುಸಿದಿದ್ದು, ಸದ್ಯಕ್ಕೆ ಐವರು ಕಾರ್ಮಿಕರು ಕಟ್ಟಡದೊಳಗೆ ಸಿಲುಕಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಎಷ್ಟು ಕಾರ್ಮಿಕರು ಸಿಲುಕಿದ್ದಾರೆ ಎಂಬ ಖಚಿತ ಮಾಹಿತಿ ಇನ್ನು ಪಡೆಯಬೇಕಿದೆ.
ಪೊಲೀಸರು ಕೂಡಾ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅಗ್ನಿಶಾಮಕ ಸಿಬ್ಬಂದಿ ನಿರ್ದೇಶಕ ಅತುಲ್ ಗಾರ್ಗ್ ತಿಳಿಸಿದ್ದಾರೆ.
ಕಟ್ಟಡ ನಿರ್ಮಾಣದ ಕಾಮಗಾರಿ ಸರಿಯಿಲ್ಲ ಈ ಬಗ್ಗೆ ಮಾರ್ಚ್ ತಿಂಗಳಲ್ಲೇ ನೊಟೀಸ್ ನೀಡಲಾಗಿತ್ತು. ಆದರೂ ಕಾಮಗಾರಿ ಮುಂದುವರಿಸಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಅವರು ತಿಳಿಸಿದರು.