ರಾಜ್ಕೋಟ್: ದೇಶೀಯ ಕ್ರಿಕೆಟ್ನಲ್ಲೇ ಅತ್ಯಂತ ಜಿಗುಟು ಬ್ಯಾಟಿಂಗ್ಗೆ ಸಾಕ್ಷಿಯಾದ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಸೌರಾಷ್ಟ್ರ ತಂಡ ಚೊಚ್ಚಲ ಬಾರಿಗೆ ರಣಜಿ ಟ್ರೋಫಿ ಮುಡಿಗೇರಿಸಿಕೊಂಡಿತು. ಇನಿಂಗ್ಸ್ ಮುನ್ನಡೆಗಾಗಿಯೇ ಅಂತಿಮ ದಿನದಾಟದವರೆಗೂ ಕುತೂಹಲ ಕೆರಳಿಸಿದ್ದ ಹಣಾಹಣಿಯಲ್ಲಿ ನಾಯಕ ಜೈದೇವ್ ಉನಾದ್ಕತ್ (96ಕ್ಕೆ2 ) ಮಾರಕ ದಾಳಿ ಮೂಲಕ ಆತಿಥೇಯ ತಂಡದ ಪಾಲಿಗೆ ಹೀರೋ ಎನಿಸಿಕೊಂಡರು. ಇದರೊಂದಿಗೆ ಸೌರಾಷ್ಟ್ರ ತಂಡ ತನ್ನ 73 ವರ್ಷಗಳ ಟೂರ್ನಿ ಇತಿಹಾಸದಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ಪಟ್ಟ ಅಲಂಕರಿಸಿತು. ಇನಿಂಗ್ಸ್ ಮುನ್ನಡೆಗಾಗಿ ಎರಡು ದಿನಗಳ ಕಾಲ ಹೋರಾಡಿದರೂ ನಿರಾಸೆ ಅನುಭವಿಸಿದ ಬಂಗಾಳ, 30 ವರ್ಷಗಳ ಬಳಿಕ ದೇಶೀಯ ಟ್ರೋಫಿ ಜಯಿಸುವ ಕನಸು ಕೂಡ ಭಗ್ನಗೊಂಡಿತು.
ಎಸ್ಸಿಎ ಸ್ಟೇಡಿಯಂನಲ್ಲಿ ಶುಕ್ರವಾರ ಅಂತ್ಯಗೊಂಡ ಪಂದ್ಯದಲ್ಲಿ 6 ವಿಕೆಟ್ಗೆ 354 ರನ್ಗಳಿಂದ ಅಂತಿಮ ದಿನದಾಟ ಆರಂಭಿಸಿದ ಬಂಗಾಳ ತಂಡ 381 ರನ್ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಸೌರಾಷ್ಟ್ರ ಅಮೂಲ್ಯ 44 ರನ್ ಮುನ್ನಡೆಯೊಂದಿಗೆ ಪ್ರಶಸ್ತಿ ಖಾತ್ರಿಪಡಿಸಿಕೊಂಡಿತು. ಬಳಿಕ ಔಪಚಾರಿಕವಾಗಿ 2ನೇ ಸರದಿ ಬ್ಯಾಟಿಂಗ್ ಆರಂಭಿಸಿದ ಸೌರಾಷ್ಟ್ರ 4 ವಿಕೆಟ್ಗೆ 105 ರನ್ಗಳಿಸಿತು. ಇದರೊಂದಿಗೆ ಚಹಾ ವಿರಾಮಕ್ಕೂ ಮೊದಲು ಪಂದ್ಯವನ್ನು ಡ್ರಾ ಘೋಷಿಸಲಾಯಿತು.
ಜೈದೇವ್ ಮಾರಕ ದಾಳಿ: ಕಳೆದ ಎರಡೂ ದಿನಗಳಿಂದ ಜಿಗುಟು ಬ್ಯಾಟಿಂಗ್ ಮೂಲಕವೇ ಸೌರಾಷ್ಟ್ರ ತಂಡಕ್ಕೆ ತಿರುಗೇಟು ನೀಡುವ ಯತ್ನದಲ್ಲಿದ್ದ ಬಂಗಾಳದ ಹೋರಾಟ ಅಂತಿಮ ದಿನ ನಡೆಯಲಿಲ್ಲ. ಗುರುವಾರದ ಅಂತ್ಯಕ್ಕೆ ಮುರಿಯದ 7ನೇ ವಿಕೆಟ್ಗೆ 91 ರನ್ ಪೇರಿಸಿದ್ದ ಅನುಷ್ಟಪ್ ಮಜುಮ್ದಾರ್ ಹಾಗೂ ಅರ್ನಾಬ್ ನಂದಿ ಜೋಡಿಗೆ ಜೈದೇವ್ ಬ್ರೇಕ್ ಹಾಕಿದರು. 58 ಹಾಗೂ 28 ರನ್ಗಳಿಂದ ದಿನದಾಟ ಆರಂಭಿಸಿದ ಅನುಷ್ಟಪ್ ಹಾಗೂ ಅರ್ನಾಬ್ ಜೋಡಿ 7 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಬಂಗಾಳ ತಂಡದ ಕುಸಿತ ಕೂಡ ಆರಂಭಗೊಂಡಿತು. 27 ರನ್ಗಳಿಗೆ ಸೇರಿಸುವಷ್ಟರಲ್ಲಿ ಬಂಗಾಳ ಸರ್ವಪತನ ಕಂಡಿತು.
12- ಬಂಗಾಳ ತಂಡ ರಣಜಿ ಟ್ರೋಫಿಯಲ್ಲಿ ಅತಿಹೆಚ್ಚು ಬಾರಿ ಫೈನಲ್ನಲ್ಲಿ ಸೋತ ತಂಡ ಎನಿಸಿಕೊಂಡಿತು. 14ನೇ ರಣಜಿ ಫೈನಲ್ ಪಂದ್ಯವಾಡಿದ ಬಂಗಾಳ ತಂಡ 12ನೇ ಬಾರಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು. ನಂತರದ ಸ್ಥಾನದಲ್ಲಿ ತಮಿಳುನಾಡು (12 ಫೈನಲ್, 10 ಸೋಲು) ಇದೆ.
1950-51ರಿಂದಲೂ ರಣಜಿ ಟ್ರೋಫಿ ಆಡುತ್ತಿರುವ ಸೌರಾಷ್ಟ್ರ ತಂಡಕ್ಕಿದು ಮೊದಲ ಪ್ರಶಸ್ತಿಯಾಗಿದೆ. ಕಳೆದ 8 ವರ್ಷಗಳಲ್ಲಿ 4ನೇ ಬಾರಿ ಫೈನಲ್ ಪಂದ್ಯ ಇದಾಗಿತ್ತು. ಸೌರಾಷ್ಟ್ರ ತಂಡ ಈ ಮುನ್ನ ಸ್ವಾತಂತ್ರ್ಯ ಪೂರ್ವದಲ್ಲಿ ನವಾನಗರ (1936-37) ಮತ್ತು ವೆಸ್ಟರ್ನ್ ಇಂಡಿಯಾ (1942-43) ಹೆಸರಿನಲ್ಲಿ ಆಡಿದಾಗ 2 ಬಾರಿ ರಣಜಿ ಟ್ರೋಫಿ ಜಯಿಸಿತ್ತು.
01= ಜೈದೇವ್ ಉನಾದ್ಕತ್ (67) ರಣಜಿ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ವೇಗದ ಬೌಲರ್ಗಳ ಪೈಕಿ ಕರ್ನಾಟಕದ ದೊಡ್ಡ ಗಣೇಶ್ (62) ದಾಖಲೆ ಹಿಂದಿಕ್ಕಿದರು.
ಯೆಸ್, ನಾವು ರಣಜಿ ಟ್ರೋಫಿ ಜಯಿಸಿದ್ದೇವೆ. ಸದ್ಯದ ಮಟ್ಟಿಗೆ ಇಡೀ ವಿಶ್ವದಲ್ಲೇ ಅತ್ಯಂತ ಸಂತೋಷಭರಿತ ನಾಯಕ ಎಂದು ಹೇಳಬಲ್ಲೆ. ಇದೇ ಲಯ ಮುಂದುವರಿಸಿಕೊಂಡು ಹೋಗಬೇಕು. ವೈಯಕ್ತಿಕವಾಗಿ ಈ ಟೂರ್ನಿ ಸಾಕಷ್ಟು ಸವಾಲು ಎದುರಾಗಿತ್ತು. ಟೂರ್ನಿಯುದ್ದಕ್ಕೂ ಈ ಸವಾಲು ಎದುರಿಸಿದೆ. ರಾಷ್ಟ್ರೀಯ ತಂಡಕ್ಕೆ ವಾಪಸಾಗುವ ಹಂಬಲವಿದೆ.
| ಜೈದೇವ್ ಉನಾದ್ಕತ್ ಸೌರಾಷ್ಟ್ರ ತಂಡದ ನಾಯಕ