ರಾಯ್ಪುರ: ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ವಗ್ರಾಮಗಳಿಗೆ ಮರಳಲು ರೈಲು, ಬಸ್ ಅಥವಾ ಬೇರಾವುದೇ ವಾಹನದ ಸೌಲಭ್ಯ ಇಲ್ಲದ ಕಾರಣ ನಾಲ್ವರು ಕಾರ್ಮಿಕರು ರೈಲ್ವೆ ಹಳಿ ಮೇಲೆ ಕಾಲ್ನಡಿಗೆಯೇ ತಮ್ಮ ಸ್ವಗ್ರಾಮದತ್ತ ಪ್ರಯಾಣ ಆರಂಭಿಸಿದ್ದರು. ದುರದೃಷ್ಟವಶಾತ್ ಸರಕು ಸಾಗಣೆ ರೈಲಿನಡಿ ಸಿಲುಕಿ ಇಬ್ಬರು ಮೃತಪಟ್ಟರೆ, ಇನ್ನಿಬ್ಬರು ಬದುಕುಳಿದರು.
ಕಾಳೇಶ್ವರ್ ರಾಜ್ವಾಡೆ (21) ಮತ್ತು ಗುಲಾಬ್ ರಾಜ್ವಾಡೆ (20) ತಮ್ಮ ಗ್ರಾಮದ ಇನ್ನಿಬ್ಬರ ಜತೆ ಪೆಂಡ್ರಾ-ಮರ್ವಾಹಿ-ಗೌರೆಲಾ ರೈಲು ಮಾರ್ಗವಾಗಿ ಸುರ್ಜಾಪುರ ಜಿಲ್ಲೆಯಲ್ಲಿರುವ ಸ್ವಗ್ರಾಮಗಳಿಗೆ ಮರಳುತ್ತಿದ್ದರು. ಭಾನುವಾರ ರಾತ್ರಿ ಇಡೀ ನಡೆದು ನಾಲ್ವರು ಛತ್ತೀಸಗಢದ ಕೊರಿಯಾ ಜಿಲ್ಲೆಯ ಉದಾಲ್ಕಚ್ಚರ್ ಮತ್ತು ಡರಿಟೋಲಾ ರೈಲು ನಿಲ್ದಾಣದ ಮಧ್ಯೆ ಇರುವ ರೈಲ್ವೆ ತಿರುವು ತಲುಪಿದ್ದರು. ಬೆಳಗ್ಗೆ 8 ಗಂಟೆಯಲ್ಲಿ ತಿಂಡಿ ತಿನ್ನಲು ನಿರ್ಧರಿಸಿದರು. ಆದರೆ ಕುಡಿಯಲು ನೀರು ಇರಲಿಲ್ಲ. ಹಾಗಾಗಿ ತಮ್ಮ ಜತೆಗಿದ್ದ ಇಬ್ಬರನ್ನು ನೀರು ತರಲು ಕಳುಹಿಸಿ, ಕಾಳೇಶ್ವರ ಮತ್ತು ಗುಲಾಬ್ ರೈಲ್ವೆ ಹಳಿ ಮೇಲೆ ಕುಳಿತಿದ್ದರು. ಅದೇ ವೇಳೆ ವೇಗವಾಗಿ ಬಂದ ಸರಕು ಸಾಗಣೆ ರೈಲು ಇವರ ಮೇಲೆ ಹರಿದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು.
ನೀರು ತಂದ ಇನ್ನಿಬ್ಬರು ಇದನ್ನು ಕಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಮನ್ನೇಂದ್ರಗಢದ ಸಿಎಸ್ಪಿ ಕರನ್ ಕುಮಾರ್ ಉಯ್ಕೆ, ತಿರುವಿನಿಂದಾಗಿ ರೈಲು ಬರುವುದು ಕಾಣಿಸದೇ ಹೋಗಿದ್ದರಿಂದ, ಇವರಿಬ್ಬರೂ ರೈಲಿಗೆ ಸಿಲುಕಿಕೊಂಡಿದ್ದಾರೆ ಎಂದು ತಿಳಿಸಿದರು.
ಲಾಕ್ಡೌನ್ನಲ್ಲಿ ಶ್ವಾನ ಪ್ರೇಮ; ಸಾಕು ನಾಯಿಗಳಿಗೆ ಸ್ನಾನ ಮಾಡಿಸಿ ನಲಿದ ಹಾರ್ದಿಕ್ ಮತ್ತು ಕೃಣಾಲ್ ಪಾಂಡ್ಯ