ಬೆಳಗಾವಿ: ಚಳಿಗಾಲದ ಅಧಿವೇಶನ ನಡೆಯಲಿರುವ ಸುವರ್ಣಸೌಧದ ಬಳಿ ಗಡಿವಿವಾದದ ಬಿಸಿ ಹಾಗೂ ಇತರ ಕಾರಣಗಳಿಂದಾಗಿ ಸಹಸ್ರಾರು ಪೊಲೀಸರ ಸರ್ಪಗಾವಲನ್ನೇ ಹಾಕಲಾಗಿದೆ. ಭದ್ರತೆಗಾಗಿ ಸಾವಿರಾರು ಸಂಖ್ಯೆಯ ಪೊಲೀಸರನ್ನು ನಿಯೋಜಿಸಿದ್ದು ಒಂದೆಡೆಯಾದರೆ, ಸುವರ್ಣಸೌಧದ ಗೇಟ್ ಬಳಿ ಎರಡು ನಾಗರಹಾವುಗಳೂ ಕಂಡುಬಂದಿವೆ.
ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ತೀವ್ರಗೊಂಡಿದ್ದು, ಚಳಿಗಾಲದ ಅಧಿವೇಶನದ ನಡುವೆಯೇ ಮಹಾಮೇಳ ಸದ್ದು, ಸರ್ಕಾರದ ಇಡೀ ಆಡಳಿತ ಯಂತ್ರದ ಉಪಸ್ಥಿತಿ, ಗಣ್ಯರು-ಜನಪ್ರತಿನಿಧಿಗಳ ಆಗಮನ, ಸಂಭಾವ್ಯ ಪ್ರತಿಭಟನೆ ಎಲ್ಲವುಗಳ ಕಾರಣದಿಂದಾಗಿ ಸುವರ್ಣಸೌಧ ಸುತ್ತ ಭರ್ಜರಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಭದ್ರತೆಗೆಂದೇ 6 ಎಸ್ಪಿ, 11 ಹೆಚ್ಚುವರಿ ಎಸ್ಪಿ, 43 ಡಿವೈಎಸ್ಪಿ, 95 ಇನ್ಸ್ಪೆಕ್ಟರ್, ಎಸ್ಐ – ಎಎಸ್ಐ ಸೇರಿ 298, ಪೇದೆ-ಮುಖ್ಯಪೇದೆ ಸೇರಿ 2829 ಅಧಿಕಾರಿ-ಸಿಬ್ಬಂದಿ ಮಾತ್ರವಲ್ಲದೆ, ಕೆಎಸ್ಆರ್ಪಿ, ಸಿಎಆರ್, ಗರುಡ ಇತ್ಯಾದಿ ಸೇರಿ ಒಟ್ಟು 4931 ಮಂದಿಯನ್ನು ನಿಯೋಜಿಸಲಾಗಿದೆ. ಮಾತ್ರವಲ್ಲದೆ ಬೆಳಗಾವಿ ನಗರ ಹಾಗೂ ಗಡಿ ಭಾಗಗಳಲ್ಲಿ ಒಟ್ಟು 26 ಚೆಕ್ಪೋಸ್ಟ್ಗಳಿದ್ದು, ಸುವರ್ಣ ವಿಧಾನಸೌಧದ ಸುತ್ತಮುತ್ತ 1 ಕಿ.ಮೀ. ಅಂತರದಲ್ಲಿ ಡಿ. 12ರಿಂದ ಜ. 11ರ ವರೆಗೂ ನಿಷೇಧಾಜ್ಞೆ ಹೊರಡಿಸಲಾಗಿದೆ.
ಹೀಗೆ ಪೊಲೀಸ್ ಸರ್ಪಗಾವಲು ವ್ಯವಸ್ಥೆ ಮಾಡಲಾಗಿರುವ ಸುವರ್ಣಸೌಧದ ಗೇಟ್ ಎರಡು ಸರ್ಪಗಳೂ ಕಂಡುಬಂದಿರುವುದು ಅಚ್ಚರಿ ಮೂಡಿಸಿದೆ. ಸುವರ್ಣ ವಿಧಾನಸೌಧದ ಪ್ರವೇಶದ್ವಾರದ ಬಳಿ ಭಾನುವಾರ ಸಂಜೆ ಎರಡು ನಾಗರಹಾವು ಕಾಣಿಸಿಕೊಂಡಿದ್ದರಿಂದ ಕೆಲಕಾಲ ಆತಂಕ ಉಂಟಾಗಿತ್ತು. ಭದ್ರತಾ ಸಿಬ್ಬಂದಿಗಾಗಿ ಹೆದ್ದಾರಿ ಸಮೀಪದ ಮುಖ್ಯಪ್ರವೇಶದ್ವಾರದ ಸಮೀಪ ಪೆಂಡಾಲ್ ಹಾಕಲು ಸಂಗ್ರಹಿಸಿದ್ದ ಕಬ್ಬಿಣದ ಸಾಮಾನು ಹಾಗೂ ಬಿದಿರಿನ ಕಂಬಗಳಲ್ಲಿ ಎರಡು ನಾಗರಹಾವುಗಳು ಕಾಣಿಸಿಕೊಂಡಿದ್ದವು. ಅವುಗಳನ್ನು ಕಂಡ ಕಾರ್ಮಿಕರು ಆತಂಕಗೊಂಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಉರಗರಕ್ಷಕ ರಾಮಾ ಪಾಟೀಲ ಹಾವುಗಳನ್ನು ಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟಬಂದಿದ್ದಾರೆ.
ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್ ಮಾಡಲು ಮನವಿ
ಹಳೇ ಪಿಂಚಣಿ ಪದ್ಧತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟ; ಚುನಾವಣಾ ಪ್ರಣಾಳಿಕೆಯಲ್ಲಿ ಒಪಿಎಸ್ ಭರವಸೆಗೆ ಒತ್ತಾಯ