More

    ಕಾವೇರಿದ ತುಮಕೂರು ವಿವಿ ಸಿಂಡಿಕೇಟ್ ಸಭೆ

    ತುಮಕೂರು: ಸರ್ಕಾರದಿಂದ ಸದಸ್ಯರ ನಾಮನಿರ್ದೇಶನದ ನಂತರ ಶುಕ್ರವಾರ ನಡೆದ ಮೊದಲ ವಿವಿ ಸಿಂಡಿಕೇಟ್ ಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿದ್ದು, ಆಡಳಿತ ಮಂಡಳಿ ಏಕಪಕ್ಷೀಯ ನಿರ್ಧಾರಕ್ಕೆ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಿದೆ.

    ಸಿಂಡಿಕೇಟ್ ಸಭೆಯ ಒಪ್ಪಿಗೆಗೆ ಇಟ್ಟಿದ್ದ ಕೆಲ ಪ್ರಮುಖ ವಿಷಯಗಳನ್ನು ಚರ್ಚಿಸಲು ಜ.14ಕ್ಕೆ ವಿಶೇಷ ಸಭೆ ನಡೆಸಲು ತೀರ್ಮಾನಿಸಲಾಗಿದೆ. 13ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸೇರಿ 26 ಪ್ರಮುಖ ವಿಷಯಗಳನ್ನು ಚರ್ಚಿಸಲಾಯಿತು. ಗೌರವ ಡಾಕ್ಟರೇಟ್‌ಗೆ ತಜ್ಞರ ಸಮಿತಿಗೆ 7 ಸಾಧಕರನ್ನು ಶಿಫಾರಸು ಮಾಡಲು ತೀರ್ಮಾನಿಸಲಾಯಿತು.

    ಗಾಂಧಿ ಭವನಕ್ಕೆ 1 ಎಕರೆ ಜಮೀನು: ವಿವಿ ಬಿದರಕಟ್ಟೆ ನೂತನ ಕ್ಯಾಂಪಸ್ ಆವರಣದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ‘ಗಾಂಧಿ ಭವನ’ ನಿರ್ಮಾಣ ಮಾಡಲು ವಾರ್ತಾ ಇಲಾಖೆ ಮನವಿ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿ ಸೂಚನೆಯಂತೆ 1 ಎಕರೆ ಭೂಮಿ ನೀಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

    ಪಿಎಚ್‌ಡಿ ಸಂಶೋಧನಾರ್ಥಿಗಳ ಪ್ರಗತಿ ವರದಿ ಹಾಗೂ ಮಾರ್ಗದರ್ಶಕರ ಮಾನ್ಯತೆ ಅರ್ಜಿ ವಿಳಂಬ ಮಾಡಿರುವ ಬಗ್ಗೆ ವಿದ್ಯಾರ್ಥಿಗಳು ನೀಡಿರುವ ದೂರಿನ ಬಗ್ಗೆ ಸಮಿತಿ ತನಿಖೆ ನಡೆಸಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅಂತಹ ಪ್ರಾಧ್ಯಾಪಕರ ಗೈಡ್‌ಶಿಪ್ ಅವರನ್ನು 2 ವರ್ಷ ಅಮಾನತಿನಲ್ಲಿಡಲು ಸಭೆಯಲ್ಲಿ ಸೂಚಿಸಲಾಗಿದೆ. ವೃಕ್ಷ ವಿಜ್ಞಾನ್ ಪ್ರೈ ಲಿ.,ಡಿ ಮಿಥಿಕ್ ಸೊಸೈಟಿ ಹಾಗೂ ಊರ್ವಿ ಪ್ರೈ ಲಿ., ಸಂಸ್ಥೆಗಳ ಜತೆ ಸಂಶೋಧನಾ ವಿಭಾಗಗಳ ಜತೆ ಮಾಡಿಕೊಳ್ಳಲು ಮುಂದಾಗಿದ್ದ ಒಡಂಬಡಿಕೆಗೆ ಸಿಂಡಿಕೇಟ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಈ ಸಂಸ್ಥೆಗಳ ಪೂರ್ವಾಪರ ತಿಳಿದುಕೊಂಡು ಮುಂದುವರಿಯಲು ನಿರ್ಧರಿ ಸಲಾಯಿತು ಎಂದು ಸಭೆಯಲ್ಲಿ ಹಾಜರಿದ್ದ ಸದಸ್ಯರು ‘ವಿಜಯವಾಣಿ’ಗೆ ತಿಳಿಸಿದರು.

    ವಿಜೆಎನ್‌ಎಲ್ ಸಹಯೋಗ: ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಲು ಆರಂಭಿಸಿರುವ ಡಾ.ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ರಾಜ್ಯ ಸರ್ಕಾರ ವಿಶ್ವೇಶ್ವರಯ್ಯ ಜಲ ನಿಗಮ ಮಂಡಲಿ 50 ಲಕ್ಷ ರೂ. ನೀಡಿದ್ದು ಸಹಯೋಗದಲ್ಲಿ ಕಾರ್ಯನಿರ್ವಹಿಸಲು ತೀರ್ಮಾನಿಸಲಾಗಿದೆ. ಪೀಠದ ನಿರ್ದೇಶಕರಾಗಿ ವಿಜೆಎನ್‌ಎಲ್ ಎಂಡಿ ಜಯಪ್ರಕಾಶ್ ಹಾಗೂ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಬಿ.ರವೀಂದ್ರಕುಮಾರ್ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲು ಸಭೆ ಒಪ್ಪಿಗೆ ಸೂಚಿಸಿದೆ.

    ರೂಸಾ ಹಣ ಬಳಕೆಗೆ ನಿರ್ಮಿತಿ ಕೇಂದ್ರ ಒಲ್ಲೇ!: ವಿವಿಧ ಕಾಮಗಾರಿ ಹಾಗೂ ಖರೀದಿಗೆ ರೂಸಾ ವತಿಯಿಂದ ವಿವಿಗೆ ಬಂದಿರುವ 5.50 ಕೋಟಿ ರೂಪಾಯಿಯನ್ನು ತುರ್ತಾಗಿ ಖರ್ಚು ಮಾಡಬೇಕಿದ್ದು, ನಿರ್ಮಿತಿ ಕೇಂದ್ರ, ಕಿಯೋನಿಕ್ಸ್ ಮತ್ತಿತರ ಖಾಸಗಿ ಸಂಸ್ಥೆಗಳ ಮೂಲಕ ಕಾಮಗಾರಿ ನಿರ್ವಹಿಸಲು ಸಭೆಯ ಮುಂದೆ ಸ್ಥಿರೀಕರಣಕ್ಕಿದ್ದ ಅಂಶಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು ಎನ್ನಲಾಗಿದೆ. ವಿವಿಯಲ್ಲಿಯೇ ಇಂಜಿನಿಯರಿಂಗ್ ವಿಭಾಗವಿದ್ದು, ಪಾರದರ್ಶಕವಾಗಿ ಅಲ್ಪಾವಧಿ ಟೆಂಡರ್ ಮೂಲಕ ಹಣ ಬಳಸಲು ಸದಸ್ಯರೆಲ್ಲ ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಈ ಬಗ್ಗೆ ಚರ್ಚಿಸಲು ಜ.14ರಂದು ವಿಶೇಷ ಸಭೆಗೆ ನಿರ್ಧರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts