More

    ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಶೀಘ್ರ

    ದಾವಣಗೆರೆ: ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಕಾಮಗಾರಿಗೆ ಈ ವರ್ಷದೊಳಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಶಂಕುಸ್ಥಾಪನೆ ನೆರವೇರಿಸಲು ಚಿಂತನೆ ನಡೆದಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

    ಆನಗೋಡು ಸಮೀಪದ ಉಳುಪಿನಕಟ್ಟೆ ಬಳಿ 4 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಉದ್ಘಾಟಿಸಿ ಮಾತನಾಡಿ, ನೇರ ರೈಲು ಮಾರ್ಗ ಮಂಜೂರಾಗಿ 10 ವರ್ಷ ಕಳೆದಿವೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

    ಜಿಲ್ಲೆಯಲ್ಲಿ ಎಫ್‌ಎಂ ಬ್ಯಾಂಡ್ ನಿರ್ಮಿಸಲು 12 ಕೋಟಿ ರೂ. ಅನುಮೋದನೆ ಆಗಿದ್ದಾಗ ಜಾಗ ಸಿಕ್ಕಿರಲಿಲ್ಲ. ಉಳುಪಿನಕಟ್ಟೆ ಬಳಿ ಈಗ 3 ಎಕರೆ ಜಾಗ ಗುರುತಿಸಲಾಗಿದೆ. ಎಫ್‌ಎಂ ಬ್ಯಾಂಡ್‌ಗಳನ್ನು ಖಾಸಗಿಯವರಿಗೆ ವಹಿಸಿರುವ ಕಾರಣಕ್ಕೆ ಸರ್ಕಾರ ಬಂಡವಾಳ ಹಾಕಲು ಸಿದ್ಧವಿಲ್ಲ. ಆದರೂ ಇಲ್ಲಿ ಅಂದುಕೊಂಡ ಉದ್ದೇಶ ಸಾಕಾರಗೊಳಿಸಲು ಯತ್ನಿಸಲಾಗುವುದು ಎಂದರು.

    ದಾವಣಗೆರೆ ಜಿಲ್ಲೆಯಲ್ಲಿ ಷಟ್ಪದಿ ರಸ್ತೆ ನಿರ್ಮಾಣವಾದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಅಸಡ್ಡೆಯಿಂದಾಗಿ ಬನಶಂಕರಿ ಲೇಔಟ್ ಬಳಿ ಸೇರಿ ಕೆಲವೆಡೆ ಸರ್ವೀಸ್ ರಸ್ತೆಗಳ ಕಾಮಗಾರಿಗಳೇ ಪೂರ್ಣಗೊಂಡಿಲ್ಲ ಎಂದು ಕಿಡಿ ಕಾರಿದರು.

    ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ತಡವಾಗಿಯಾದರೂ ಉದ್ಘಾಟನೆಯಾಗಿದೆ. ಇಲ್ಲಿ ಪ್ರದರ್ಶಿಸಲಾದ ವಿಜ್ಞಾನದ ಮಾದರಿಗಳ ಬಗ್ಗೆ ಎಲ್ಲ ಶಾಲೆಗಳಿಗೂ ಮಾಹಿತಿ ನೀಡಿ ವಿದ್ಯಾರ್ಥಿಗಳ ವೀಕ್ಷಣೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಇದರಿಂದ ಮಕ್ಕಳಲ್ಲಿ ಪ್ರೇರಣೆ ಸಿಗಲಿದೆ. ಹೊಸ ಅನ್ವೇಷಣೆಯ ಆಲೋಚನೆ ಬರಬಹುದು ಎಂದರು. ಮೂರು ತಿಂಗಳಲ್ಲಿ ಬಾಕಿ ಕಾಮಗಾರಿ ಮುಗಿಸಿ ವ್ಯವಸ್ಥಿತಗೊಳಿಸುವಂತೆಯೂ ಹೇಳಿದರು.

    ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ ಮಾತನಾಡಿ, ವಿಜ್ಞಾನ ಕೇಂದ್ರ ಇಲ್ಲಿಯೇ ಸ್ಥಾಪನೆಯಾಗಿರುವ ಹಿನ್ನೆಲೆಯಲ್ಲಿ ಮಾದರಿಗಳನ್ನು ನೋಡಲು ಮಕ್ಕಳು ದೂರದೂರಿಗೆ ಹೋಗುವ ಪ್ರಮೇಯ ತಪ್ಪಿದೆ. ವಿಜ್ಞಾನದ ಸ್ಪರ್ಧೆಗೆ ತಕ್ಕಂತೆ ಬದಲಾವಣೆ ಅಗತ್ಯವಿದೆ ಎಂದರು.

    ಡಿಡಿಪಿಐ ಜಿ.ಆರ್.ತಿಪ್ಪೇಶಪ್ಪ ಮಾತನಾಡಿ, 2013ರಲ್ಲಿ ಭೂಮಿಪೂಜೆ ಕಂಡಿದ್ದ ಕಟ್ಟಡ 10 ವರ್ಷದ ನಂತರ ಉದ್ಘಾಟನೆಗೊಂಡಿದೆ. ಶಾಲಾ ಮಕ್ಕಳು ದೇಣಿಗೆ ಸಂಗ್ರಹಿಸಿದ್ದರು. ಅಂದಿನ ಜಿಪಂ ಸಿಇಒ ಗುತ್ತಿ ಜಂಬುನಾಥ್ 10 ಲಕ್ಷ ರೂ. ನೆರವು ನೀಡಿದ್ದರು ಎಂದು ಸ್ಮರಿಸಿದರು. ಈ ಕೇಂದ್ರವನ್ನು ವ್ಯವಸ್ಥಿತವಾಗಿ ನಡೆಸಲಾಗುವುದು ಎಂದೂ ಹೇಳಿದರು.

    ಕಾರ್ಯಕ್ರಮದಲ್ಲಿ ಆನಗೋಡು ಗ್ರಾಪಂ ಅಧ್ಯಕ್ಷ ಎಂ.ಮಾದಪ್ಪ, ಡಯಟ್ ಉಪನಿರ್ದೇಶಕಿ ಗೀತಾ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಎಲ್.ರವಿ ಇದ್ದರು. ನೋಡಲ್ ಅಧಿಕಾರಿ ವಸಂತಕುಮಾರಿ ಕಾರ್ಯಕ್ರಮ ನಿರೂಪಿಸಿದರು.

    ಹುಬ್ಬಳ್ಳಿ-ಬೆಂಗಳೂರು ಜೋಡಿ ರೈಲು
    ಮಾರ್ಗ ಪೂರ್ಣಕ್ಕೆ ಬೇಕು ಒಂದು ವರ್ಷ
    ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ರೈತರಿಗೆ 20 ಲಕ್ಷ ಕೋಟಿ ರೂ. ಹಣ ನೀಡಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ನೆರವು ಕಲ್ಪಿಸಿದೆ. 9500 ಕೋಟಿ ರೂ. ಮೊತ್ತದಲ್ಲಿ ಹುಬ್ಬಳ್ಳಿ-ಬೆಂಗಳೂರು ರೈಲು ಮಾರ್ಗದ ವಿದ್ಯುದೀಕರಣ ಹಾಗೂ ಜೋಡಿ ರೈಲು ಮಾರ್ಗಗಳನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.

    ಕಣ್ಸೆಳೆವ ಕಟ್ಟಡ: ಹೊರ ನೋಟದಿಂದಲೇ ಕಣ್ಸೆಳೆವ ವಿಜ್ಞಾನ ಕೇಂದ್ರದಲ್ಲಿ ಒಳಾಂಗಣ ಹಾಗೂ ಹೊರಾವರಣದಲ್ಲಿ ಅಳವಡಿಸಲಾದ 52 ವಿಧದ ವಿನೋದ ವಿಜ್ಞಾನ ಮಾದರಿಗಳು ಮಕ್ಕಳನ್ನು ಆಕರ್ಷಿಸಲಿವೆ. ಪ್ರತಿಯೊಂದರ ಬಗ್ಗೆಯೂ ಮಾಹಿತಿ ಫಲಕ ಇರಿಸಲಾಗಿದೆ. ಶಕ್ತಿ ಮತ್ತು ಆಕರಗಳು, ಹವಾಮಾನ ಬದಲಾವಣೆ ಮತ್ತು ಪರಿಣಾಮಗಳು ಎರಡೂ ವಿಷಯಾಧಾರಿತ ವಿಜ್ಞಾನ ಗ್ಯಾಲರಿಗಳು ಮೊದಲ ಮಹಡಿಯಲ್ಲಿ ಸಿದ್ಧಗೊಳ್ಳುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts