ನೈಜೀರಿಯಾ: ಕರ್ನಾಟಕದ ಕರಾವಳಿ ಪ್ರದೇಶದ ಎರಡು ಜಿಲ್ಲೆಗಳಲ್ಲಷ್ಟೇ ಪ್ರಮುಖವಾಗಿ ಇರುವ ತುಳು ಸಂಸ್ಕೃತಿ ದೂರದ ನೈಜೀರಿಯಾದಲ್ಲೂ ಅನಾವರಣಗೊಂಡಿದೆ. ಅಲ್ಲಿ ನೆಲೆಸಿರುವ ತುಳುವರ ಅಭಿಮಾನ ಇಂಥದ್ದೊಂದು ಸಂಸ್ಕೃತಿಯ ಅನಾವರಣಕ್ಕೆ ಕಾರಣವಾಗಿದೆ.
ನೈಜೀರಿಯಾ ದೇಶದಲ್ಲಿ ನೆಲೆಸಿರುವ ತುಳುವ ಬಂಧುಗಳ ವಾರ್ಷಿಕ ಸಮ್ಮಿಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನ.13ರಂದು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ಸಂಘದ ಸ್ಥಾಪಕ ಸದಸ್ಯ ಅಜಿತ್ ಚೌಟ, ರೋಹಿತ್ ಸಾಲ್ಯಾನ್, ಸದಾನಂದ ಮೆಲಂತ ಹಾಗೂ ಇತರ ಹಿರಿಯರು ಜತೆಗೂಡಿ ದೀಪ ಬೆಳಗುವ ಮೂಲಕ ಆರಂಭಿಸಿದರು.
ನೈಜೀರಿಯಾದಲ್ಲಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ತುಳು ಬಂಧುಗಳು ಒಂದೆಡೆ ಸೇರಿ ತುಳು ಭಾಷೆ, ಸಂಸ್ಕೃತಿಯನ್ನು ಸಾರುವ ವಿವಿಧ ನೃತ್ಯ ರೂಪಕ, ಕಿರು ನಾಟಕಗಳನ್ನು ಪ್ರದರ್ಶನ ನಡೆಸಿದರು.
ದೂರದ ಊರಿನಲ್ಲಿ ಕೆಲಸದ ನಿಮಿತ್ತ ನೆಲೆಸಿದ್ದರೂ ನಮ್ಮ ದೇಶ, ನಮ್ಮ ಊರು ಎಂಬ ಅಭಿಮಾನದಲ್ಲಿ ಕಳೆದ 22 ವರ್ಷಗಳಿಂದ “ತುಳುಕೂಟ ಲಾಗೋಸ್ – ನೈಜೀರಿಯಾ” ಎಂಬ ಸಂಘಟನೆ ಕಟ್ಟಿಕೊಂಡು ಹಲವಾರು ಸಮಾಜಮುಖಿ ಕಾರ್ಯಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಜೊತೆಗೆ ವಾರ್ಷಿಕ ಕ್ರೀಡಾಕೂಟವನ್ನೂ ಆಯೋಜಿಸಿ ಎಲ್ಲರೂ ಒಟ್ಟಾಗಿ ಅಭಿಮಾನದಿಂದ ಬೆರೆಯುತ್ತಿದ್ದಾರೆ.
ಇದನ್ನೂ ಓದಿ: ಭಿಕ್ಷೆ ಬೇಡುತ್ತಿದ್ದಾಕೆಗೆ ಕೊನೆಗಾಲದಲ್ಲಿ ಮಕ್ಕಳೊಂದಿಗಿರುವ ಬಯಕೆ; ಮಕ್ಕಳ ಹುಡುಕಾಟಕ್ಕೆ ಶುರುವಾಗಿದೆ ‘ಮಿಷನ್ ಸರೋಜಮ್ಮ’
2022ರ ಅ. 9ರಂದು ನಡೆದ ವಾರ್ಷಿಕ ಕ್ರೀಡಾಕೂಟದ ವಿಜೇತರಿಗೆ ಇದೇ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಲವಾರು ತುಳುವರು ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ಜಯಪ್ರಕಾಶ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಒಂದೂವರೆ ವರ್ಷದ ಮಗನನ್ನೇ ಮಾರಿದ ತಾಯಿ; ನಾಲ್ಕೂವರೆ ವರ್ಷ ಹುಡುಕಾಡಿ ಪುತ್ರನನ್ನು ಪತ್ತೆ ಮಾಡಿ ಪಡೆದ ತಂದೆ!