ಮೈಸೂರು: ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ಓಪನ್ ಡೇ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಓಪನ್ ಡೇನಲ್ಲಿ ಪಾಲ್ಗೊಂಡಿದ್ದ ಮೈಸೂರು ಭಾಗದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಇಂಜಿನಿಯರಿಂಗ್ ಶಿಕ್ಷಣ ಮತ್ತು ವೃತ್ತಿಯಲ್ಲಿನ ಅವಕಾಶಗಳ ಬಗ್ಗೆ ಮಾಹಿತಿ ಒದಗಿಸಲಾಯಿತು.
ಇನ್ಫೋಸಿಸ್ ಸಂಸ್ಥೆಯ ಅಸೋಸಿಯೇಟ್ ಉಪಾಧ್ಯಕ್ಷ ಕೆ.ಎಸ್. ಸುಂದರ್ ಮಾತನಾಡಿ, ಇಂಜಿನಿಯರ್ಗಳು ಕೇವಲ ಸೀಮಿತ ತಾಂತ್ರಿಕ ಜ್ಞಾನಕ್ಕಿಂತ ಸಮಗ್ರ ಜ್ಞಾನ ಹೊಂದಿರಬೇಕು. ಇಂದು ಜಗತ್ತು ಹಸ್ತಚಾಲಿತ ಮಾನವ ಕೇಂದ್ರಿತ ವಿಧಾನದಿಂದ ಯಂತ್ರ ಕೇಂದ್ರಿತ ವಿಧಾನಕ್ಕೆ ಬದಲಾಗಿದೆ. ಜಗತ್ತು ವೇಗವಾಗಿ ಬದಲಾಗುತ್ತಿದ್ದು, ಈ ವೇಗಕ್ಕೆ ಅನುಗುಣವಾಗಿ ನೀವು ಸಹ ಬದಲಾಗಬೇಕು. ಕಷ್ಟಪಟ್ಟು ಕೆಲಸ ಮಾಡುವುದು ಅವಶ್ಯಕ. ಅದರ ಜತೆಗೆ ಸ್ಮಾರ್ಟ್ ವರ್ಕ್ ಸಹ ಅತ್ಯಂತ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಬಿ.ಸದಾಶಿವೇಗೌಡ ಅವರು ಇಂಜಿನಿಯರಿಂಗ್ ಸೀಟುಗಳ ಲಭ್ಯತೆ ಹಾಗೂ ಕಾಲೇಜು ಆಯ್ಕೆಯಲ್ಲಿ ಎನ್ಬಿಎ, ನ್ಯಾಕ್ನಂತಹ ಮಾನ್ಯತೆಗಳು ಮತ್ತು ಎನ್ಐಆರ್ಎಫ್ನಂತಹ ಶ್ರೇಯಾಂಕಗಳ ಮಹತ್ವ ತಿಳಿಸಿಕೊಟ್ಟರು.
ಇಂಜಿನಿಯರಿಂಗ್ ಪ್ರವೇಶಿಸಲು ರಾಜ್ಯಾದ್ಯಂತ ತೀವ್ರ ಪೈಪೋಟಿ ಇದೆ. ರಾಜ್ಯಾದ್ಯಂತ ಇದೀಗ ಮುಕ್ತಾಯಗೊಂಡ ಸಿಇಟಿಯಲ್ಲಿ 1.20 ಲಕ್ಷ ಸೀಟುಗಳಿಗೆ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕೇವಲ 6000 ಸೀಟುಗಳಿಗಾಗಿ ಮೈಸೂರಿನಲ್ಲಿಯೇ 13,000 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು ತಿಳಿಸಿದರು.
ವಿದ್ಯಾವರ್ಧಕ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಆಲ್ಫ್ರೆಡ್ ವಿವೇಕ್ ಡಿ’ಸೋಜ ಅಭಿವೃದ್ಧಿಪಡಿಸಿದ ‘ಸಿಇಟಿ ಅಣಕು ಆಯ್ಕೆಯ ಪ್ರವೇಶ ಪೋರ್ಟಲ್’ ಈ ಸಂದರ್ಭ ವಿದ್ಯಾರ್ಥಿಗಳ ಗಮನ ಸೆಳೆಯಿತು.
ಇಂಟೆಲ್ ಸಿಸ್ಟಮ್ ಚೀಫ್ ಡಿಸೈನ್ ಇಂಜಿನಿಯರ್ ರವೀಂದ್ರ ವೆಂಕಟೇಶ್, ಸಿಇಟಿ ಸೆಲ್ ನೋಡಲ್ ಅಧಿಕಾರಿ ಉದಯ್ ಶಂಕರ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ. ವಿಶ್ವನಾಥ್, ಖಜಾಂಚಿ ಶ್ರೀಶೈಲ್ ರಾಮಣ್ಣವರ್ ಹಾಗೂ ಇತರರು ಇದ್ದರು.