ತಿರುಮಲ: ತಿರುಪತಿ ಲಡ್ಡುವಿನ ವಿಶೇಷವೇ ಅಂಥದ್ದು. ಒಂದೆಡೆ ಅದು ದೇವರ ಪ್ರಸಾದ ಎಂದಾದರೆ, ಇನ್ನೊಂದೆಡೆ ಈ ಲಡ್ಡುವಿನ ರುಚಿ ಬೇರೆಲ್ಲೂ ಸಿಗುವುದೇ ಇಲ್ಲ ಎನ್ನುವುದು ಕೂಡ ಇದರ ಪ್ಲಸ್ ಪಾಯಿಂಟ್. ಸಿಹಿ ಪ್ರಿಯರಿಗಂತೂ ಇದು ದೇವರ ಪ್ರಸಾದ ಎನ್ನುವುದಕ್ಕಿಂತಲೂ ಹೆಚ್ಚಾಗಿ ಇದರ ರುಚಿಯನ್ನು ಮೆಲ್ಲುವುದೇ ಸೊಗಸು.
ಆದರೆ ಲಾಕ್ಡೌನ್ನಿಂದಾಗಿ ತಿರುಪತಿ ದೇವಾಲಯವೇ ಸಂಕಷ್ಟದಲ್ಲಿ ಸಿಲುಕಿದೆ. ಇನ್ನು ಲಡ್ಡುವಿನ ಮಾತೆಲ್ಲಿ? ಏಪ್ರಿಲ್- ಮೇ ತಿಂಗಳ ರಜಾ ದಿನಗಳಲ್ಲಿ ಸಾವಿರಾರು ಕೋಟಿ ಆದಾಯ ಗಳಿಸಬೇಕಿದ್ದ ತಿರುಮಲ ದೇವಾಲಯ ಈಗ ತನ್ನ ಆಸ್ತಿಯನ್ನೇ ಮಾರಾಟ ಮಾಡುವ ಪರಿಸ್ಥಿತಿಗೆ ಕರೊನಾ ವೈರಸ್ ತಂದೊಡ್ಡಿದೆ. ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ಮಾರ್ಚ್ 20ರಿಂದ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: ಕಳ್ಳರಿಗೆ ಕರೊನಾ ಸೋಂಕು: ನ್ಯಾಯಾಧೀಶರು, ನಟ ಹಾಗೂ ಶಾಸಕ ಕ್ವಾರಂಟೈನ್ಗೆ!
ಅದೇನೇ ಇರಲಿ. ಈಗಂತೂ ಲಡ್ಡು ಪ್ರಸಾದ ನಿನ್ನೆಯಿಂದ ಹಂಚಲು ಶುರು ಮಾಡಲಾಗಿದೆ. ಇಲ್ಲಿಯವರೆಗೆ 50 ರೂಪಾಯಿ ಬೆಲೆ ಬಾಳುತ್ತಿದ್ದ ಲಡ್ಡುವನ್ನು ಲಾಕ್ಡೌನ್ ತೆರವಿನ ನಂತರ ಅರ್ಧ ಬೆಲೆಗೆ ಅಂದರೆ 25 ರೂಪಾಯಿಗೆ ಮಾರಾಟ ಮಾಡಲು ದೇವಸ್ಥಾನ ಮಂಡಳಿ ನಿರ್ಧರಿಸಿದ್ದು, ನಿನ್ನೆ ಅದರ ಹಂಚಿಕೆ ಕೂಡ ಮಾಡಲಾಗಿದೆ.
ಆಂಧ್ರಪ್ರದೇಶದ 12 ಜಿಲ್ಲೆಗಳಲ್ಲಿ ಲಡ್ಡು ಹಂಚಿಕೆಗೆ ಮೂರು ಗಂಟೆಗಳ ಮಿತಿಯನ್ನು ಸೀಮಿತಗೊಳಿಸಲಾಗಿತ್ತು. ಲಾಕ್ಡೌನ್ ನಿಯಮಗಳನ್ನು ಅನುಸರಿಸುವ ಮೂಲಕ ಇವುಗಳ ಹಂಚಿಕೆ ಕಾರ್ಯ ನಡೆದಿತ್ತು. ಲಾಕ್ಡೌನ್ ಸಡಿಲಿಕೆ ನಂತರ ಭಕ್ತರಿಗೆ ಸಬ್ಸಿಡಿ ರೂಪದಲ್ಲಿ ಅರ್ಧ ಬೆಲೆಗೆ ಮಾರಾಟ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ 2.4 ಲಕ್ಷ ಲಡ್ಡುಗಳು ಈ ಮೂರು ಗಂಟೆಗಳಲ್ಲಿ ಮಾರಾಟವಾಗಿದೆ.
ಇದನ್ನೂ ಓದಿ: ಸುತ್ತಲೂ ಪ್ರವಾಹ… ಕಣ್ಣೆದುರೇ ಸಾವು… ಮರವೇರಿದ ವೃದ್ಧೆ ಬಿಚ್ಚಿಟ್ಟ ಭಯಾನಕ ಅನುಭವ…
ಕರೊನಾ ವೈರಸ್ ಹೆಚ್ಚಾಗಿ ಇರುವ ಗುಂಟೂರಿನಲ್ಲಿ ವೈರಸ್ ಇನ್ನಷ್ಟು ಹರಡಬಹುದಾದ ಸಾಧ್ಯತೆ ಇದ್ದುದರಿಂದ ಇಲ್ಲಿ ಮಾರಾಟಕ್ಕೆ ಅನುಮತಿ ನೀಡಿರಲಿಲ್ಲ. ಉಳಿದೆಡೆ ಭಕ್ತರು ತಂಡೋಪತಂಡವಾಗಿ ಬಂದು ಲಡ್ಡು ಖರೀದಿಸಿ ಧನ್ಯರಾದರು.
2.4 ಲಕ್ಷ ಲಡ್ಡು ತಲಾ 25 ರೂಪಾಯಿಯಂತೆ ಗಣನೆಗೆ ತೆಗೆದುಕೊಂಡರೆ ಮೂರು ಗಂಟೆಗಳಲ್ಲಿ ದೇವಾಲಯಕ್ಕೆ ಸುಮಾರು 60 ಲಕ್ಷ ರೂಪಾಯಿ ಆದಾಯ ಬಂದಿದೆ. (ಏಜೆನ್ಸೀಸ್)