ಹಾಸನ: ಲಕ್ಕಿ ಡ್ರಾ.. ಲಕ್ಕಿ ಕೂಪನ್.. ಹೆಸರಲ್ಲಿ ವಂಚಕರು ನಿಮಗೂ ಕರೆ ಮಾಡ್ತಾರೆ ಜೋಕೆ! 25 ಲಕ್ಷ ರೂ. ಆಸೆಗೆ ಒಳಗಾದ ಆಟೋ ಚಾಲಕರೊಬ್ಬರು ವಂಚಕರ ಬಲೆಗೆ ಸಿಕ್ಕರೂ ಕೊನೇ ಕ್ಷಣದಲ್ಲಿ ಪಾರಾದ ಕಥೆಯಿದು.
ನಗರದ ಅಡ್ಲಿಮನೆ ನಿವಾಸಿ, ಆಟೋ ಚಾಲಕ ದೀಪು ಅಲಿಯಾಸ್ ಶ್ರೀಧರ್ ಅವರ ಮೊಬೈಲ್ಗೆ ಗುರುವಾರ ಪಶ್ಚಿಮ ಬಂಗಾಳದಿಂದ ಅನಾಮಿಕ ಕರೆ ಬಂದಿದ್ದು, ಲಕ್ಕಿ ಡ್ರಾನಲ್ಲಿ 25 ಲಕ್ಷ ರೂ. ಗೆದ್ದಿದ್ದೀರಿ. ನಿಮ್ಮ ಅಕೌಂಟ್ಗೆ ಹಣ ಕಳಿಸುತ್ತೇವೆ ಎಂದು ಬ್ಯಾಂಕ್ ಖಾತೆಯ ಡಿಟೇಲ್ಸ್ ಜತೆಗೆ ಫೋಟೋವನ್ನು ವಾಟ್ಸ್ಆ್ಯಪ್ ಮೂಲಕ ಪಡೆದಿದ್ದಾರೆ. ಹಣದ ಆಸೆಯಲ್ಲಿದ್ದ ದೀಪುಗೆ ಮುಂದೇನಾಯ್ತು ಗೊತ್ತಾ? ಇಲ್ಲಿದೆ ಡಿಟೇಲ್ಸ್. ಇದನ್ನೂ ಓದಿರಿ ಮಂಗಳಮುಖಿ ಆಗಲು ಹೊರಟಿದ್ದ ಬಾಲಕನ ಬದುಕಲ್ಲಿ ರೋಚಕ ತಿರುವು!
ಲಕ್ಕಿ ಡ್ರಾ ಹಣದ ಆಸೆಗೆ ಬಿದ್ದ ದೀಪು ಅನಾಮಿಕ ವ್ಯಕ್ತಿ ಕೇಳಿದ ಡಿಟೇಲ್ಸ್ ಅನ್ನು ಕಳುಹಿಸಿದರು. ಇದಾದ ಎರಡು ನಿಮಿಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ, ವಿನ್ನರ್ ನೇಮ್, ಬ್ಯಾಂಕ್ ಅಕೌಂಟ್ ನಂಬರ್ ಹಾಗೂ 25 ಲಕ್ಷ ರೂ. ಗೆದ್ದ ಹಣವೆಂಬ ಕೂಪನ್ವುಳ್ಳ ಪತ್ರವೊಂದು ದೀಪು ಅವರ ವಾಟ್ಸ್ಆ್ಯಪ್ ನಂಬರ್ಗೆ ಬಂದಿದೆ.
ಆ ಬಳಿಕ ಫೋನ್ ಮಾಡಿದ ಅನಾಮಿಕ, ಗೆದ್ದಿರುವ ದುಡ್ಡನ್ನೆಲ್ಲ ನಿಮ್ಮ ಖಾತೆಗೆ ಜಮೆ ಮಾಡಬೇಕಾದರೆ ನೀವು 9 ಸಾವಿರ ರೂ. ತೆರಿಗೆ ಪಾವತಿಸಬೇಕು ಎಂದು ತನಗೆ ಸಂಬಂಧಿಸಿದ ಬ್ಯಾಂಕ್ ಖಾತೆಯ ನಂಬರ್ ಕೊಟ್ಟಿದ್ದಾನೆ. 9 ಸಾವಿರ ರೂ. ತೆರಿಗೆ ಕಟ್ಟಬೇಕು ಎನ್ನುತ್ತಿದ್ದಂತೆ ಎಚ್ಚೆತ್ತುಕೊಂಡ ದೀಪು ತನ್ನ ಸ್ನೇಹಿತರಿಗೆ ವಿಷಯ ತಿಳಿಸಿದ್ದಾರೆ. ಇದು ವಂಚನೆಯ ಜಾಲ ಎಂದು ಅರಿವಾಗಿದೆ.
ಇದನ್ನೂ ಓದಿರಿ video/ ಮಳೆ ಸುರಿಯುತ್ತಿದ್ದರೂ ಪೊಲೀಸ್ ಠಾಣೆ ಎದುರಲ್ಲೇ ಧರಣಿ ಕುಳಿತ ಮಹಿಳೆ, ಕ್ಯಾರೆ ಎನ್ನದ ಸಿಬ್ಬಂದಿ…
ಮತ್ತೆ ಕರೆ ಮಾಡಿದ ಅನಾಮಿಕ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡ ದೀಪು, ಬಾಯಿಗೆ ಬಂದಂತೆ ಬೈಯ್ದು ಬುದ್ಧಿ ಕಲಿಸಿದ್ದಾರೆ. ಮತ್ತೊಮ್ಮೆ ಕರೆ ಮಾಡಿದರೆ ಪೊಲೀಸ್ಗೆ ಕಂಪ್ಲೇಟ್ ಕೊಡುವುದಾಗಿ ಎಚ್ಚರಿಸಿ ಕರೆ ಸ್ಥಗಿತಗೊಳಿಸಿದ್ದಾರೆ. ಇದಾದ ಬಳಿಕ ದೀಪು ಮೊಬೈಲ್ಗೆ ಅನಾಮಿಕ ಕರೆ ಬಂದಿಲ್ಲ. ಈ ಬಗ್ಗೆ ದೀಪು ಪೊಲೀಸರ ಗಮನಕ್ಕೂ ತಂದಿದ್ದಾರೆ.