ನವದೆಹಲಿ: ಪರ್ವತಶ್ರೇಣಿಗಳಲ್ಲಿ ಅತಿ ಎತ್ತರದ ಪ್ರದೇಶಗಳಲ್ಲಿ ಯುದ್ಧ ಮಾಡುವ ತರಬೇತಿ ಪಡೆದಿರುವ ಸಮರಕಲಿಗಳನ್ನು ಭಾರತ ವಾಸ್ತವ ಗಡಿರೇಖೆ ಬಳಿಗೆ ರವಾನಿಸಿದೆ. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಯೋಧರು ಭಾರತದ ಭೂಭಾಗವನ್ನು ಅತಿಕ್ರಮಿಸಲು ಯತ್ನಿಸಿದ್ದರೆ ಅದನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ಉದ್ದೇಶದಿಂದ ಭಾರತ ಈ ಕ್ರಮ ಕೈಗೊಂಡಿರುವುದಾಗಿ ಹೇಳಲಾಗಿದೆ.
ಪಿಎಲ್ಎ ಯೋಧರು ಲಡಾಖ್ನ ಪಶ್ಚಿಮ, ಮಧ್ಯ ಅಥವಾ ಪೂರ್ವ ವಲಯಗಳಲ್ಲಿ ಭಾರತದ ಭೂಭಾಗವನ್ನು ಅತಿಕ್ರಮಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ. ತನ್ಮೂಲಕ ಅದು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಹುನ್ನಾರ ನಡೆಸಿದೆ. ಈ ಹಿನ್ನೆಲೆಯಲ್ಲಿ ಪರ್ವತಶ್ರೇಣಿಗಳಲ್ಲಿ ಯುದ್ಧ ಮಾಡುವ ವಿಶೇಷ ತರಬೇತಿ ಪಡೆದಿರುವ ಯೋಧರನ್ನು ಎಲ್ಎಸಿ ಬಳಿಗೆ ರವಾನಿಸಲಾಗಿದೆ ಎಂದು ಸೇನಾಪಡೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ವಾಸ್ತವ ಗಡಿರೇಖೆಯಲ್ಲಿ ಉದ್ವಿಗ್ನ ಪರಿಸ್ಥಿತಿ; ಪೂರ್ಣ ಪ್ರಮಾಣದ ಸೇನೆ ನಿಯೋಜನೆ
ಉತ್ತರಾಖಂಡ, ಲಡಾಖ್, ಗೂರ್ಖಾ, ಅರುಣಾಚಲಪ್ರದೇಶ ಮತ್ತು ಸಿಕ್ಕಿಂ ಮೂಲದ ಸೇನಾಪಡೆ ಉತ್ತರ ಭಾಗದ ಗಡಿ ರಕ್ಷಣೆಗಾಗಿ ಪರ್ವತಶ್ರೇಣಿಗಳ ಅತಿಎತ್ತರದ ಪ್ರದೇಶದಲ್ಲಿ ಯುದ್ಧಮಾಡುವ ತರಬೇತಿ ಪಡೆದುಕೊಂಡಿದ್ದಾರೆ. ಇದೀಗ ಅಪಾಯದ ಮುನ್ಸೂಚನೆ ದೊರೆತರೆ ಎಲ್ಎಸಿ ಬಳಿ ಯುದ್ಧಮಾಡಲು ಅನುವಾಗುವಂತೆ ಇವರೆಲ್ಲರನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಇವರೆಲ್ಲರೂ ಗೆರಿಲ್ಲಾ ಯುದ್ಧದ ಮಾದರಿಯ ತರಬೇತಿ ಪಡೆದಿದ್ದು, ಅತಿಎತ್ತರದ ಪ್ರದೇಶದಲ್ಲಿ ಹೋರಾಟ ಮಾಡಲು ಸಮರ್ಥರಾಗಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಕೂಡ ಇವರ ನೆರವು ಪಡೆದುಕೊಂಡು ಶತ್ರು ಪಾಳೆಯವನ್ನು ಹಣಿಯಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಟಿಬೆಟಿಯನ್ ಪ್ರಸ್ಥಭೂಮಿ ಚಪಾಟೆಯಾಗಿದ್ದು, ಇದರಿಂದ ಚೀನಿ ಯೋಧರಿಗೆ ಅನುಕೂಲವಾಗಲಿದೆ. ಆದರೆ, ಭಾರತದ ಸೀಮೆ ಕರಾಕೋರಂನಲ್ಲಿರುವ ಕೆ2 ಪರ್ವದಿಂದ ಆರಂಭವಾಗಿ ಉತ್ತರಾಖಂಡದ ನಾನಾದೇವಿ ಪರ್ವತಶ್ರೇಣಿಗಳವರೆಗೂ ಹಬ್ಬಿದೆ. ಸಿಕ್ಕಿಂನಲ್ಲಿ ಕಾಂಚೆನ್ಜುಂಗದಿಂದ ಅರುಣಾಚಲಪ್ರದೇಶದ ನಾಮಚೆ ಬರ್ವಾ ಪರ್ವತಶ್ರೇಣಿಗಳವರೆಗೆ ವಿಸ್ತರಿಸಿದೆ. ಪರ್ವತಶ್ರೇಣಿಗಳ ಪ್ರದೇಶದಲ್ಲಿ ಶತ್ರು ಪಾಳೆಯ ಭೂಮಿಯನ್ನು ವಶಪಡಿಸಿಕೊಳ್ಳುವುದು ಅಷ್ಟೇ ಅಲ್ಲ, ನಮ್ಮ ಭೂಭಾಗವನ್ನು ಸಂರಕ್ಷಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಯುದ್ದ ತಜ್ಞರು ತಿಳಿಸಿದ್ದಾರೆ.
ಚೀನಾ ಗುರಿಯಾಗಿಸಿ ಕ್ಷಿಪಣಿ ಸಜ್ಜುಗೊಳಿಸಿರುವ ಜಪಾನ್; ಯಾವುದರ ಮುನ್ಸೂಚನೆ ಇದು…?