ತಿರುವನಂತಪುರ: ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿ, ಕೆಲ ದಿನಗಳ ಕಾಲ ಜೈಲು ವಾಸ ಅನುಭವಿಸಿ, ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿರುವ ಕೇರಳದ ಇನ್ಸ್ಟಾಗ್ರಾಂ ರೀಲ್ಸ್ ಸ್ಟಾರ್ ವಿನೀತ್, ಹೊಸ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾನೆ.
ಟ್ರೋಲ್ಗಳ ಮೂಲಕ ನನಗೆ ಬೆಳೆಯಲು ಸಹಾಯ ಮಾಡಿದ ಟ್ರೋಲರ್ಗಳಿಗೆ, ನನ್ನನ್ನು ಜೈಲಿಗೆ ತಳ್ಳಿದ ವ್ಯಕ್ತಿ ಇಲ್ಲಿದ್ದಾನೆ ಅಲ್ಲವೇ?, ಎಂಬ ಅಡಿಬರಹದೊಂದಿಗೆ ವಿಡಿಯೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾನೆ. ವಿಡಿಯೋದಲ್ಲಿ ವಿನೀತ್, ಕಾಲಿವುಡ್ ನಿರ್ದೇಶಕ ವೆಂಕಟ್ ಪ್ರಭು ನಿರ್ಮಾಣದ ಮಾನಾಡು ಸಿನಿಮಾದ ಖಳನಾಯಕ ಎಸ್.ಜೆ. ಸೂರ್ಯ ಅವರ ಎಂಟ್ರಿ ದೃಶ್ಯವನ್ನು ನಕಲು ಮಾಡಿದ್ದಾನೆ. ಸಿಗರೇಟ್ ಸೇದುತ್ತಾ ಐಷಾರಾಮಿ ಕಾರಿನಿಂದ ಕೆಳಗಿಳಿಯುವ ದೃಶ್ಯ ವಿಡಿಯೋದಲ್ಲಿದ್ದು, ತನ್ನನ್ನು ತಾನು ಖಳನಾಯಕನಂತೆ ಬಿಂಬಿಸಿಕೊಂಡಿದ್ದಾನೆ.
ವಿಡಿಯೋ ವೈರಲ್ ಆಗಿದ್ದು, ಜೈಲಿನಿಂದ ಹೊರಬಂದರೂ ಈತನಿಗೆ ಇನ್ನು ಬುದ್ಧಿ ಬಂದಿಲ್ಲವಲ್ಲ ಅಂತಾ ನೆಟ್ಟಿಗರು ವಿನೀತ್ ವಿರುದ್ಧ ಕಾಮೆಂಟ್ ಮೂಲಕ ಟೀಕಾಪ್ರಹಾರ ನಡೆಸಿದ್ದಾರೆ.
ವಿನೀತ್ ಜೈಲಿಗೆ ಹೋಗಿದ್ದೇಕೆ?
ವಿನೀತ್ ಇನ್ಸ್ಟಾಗ್ರಾಂ ರೀಲ್ಸ್ ಮೂಲಕವೇ ಕೇರಳದಲ್ಲಿ ಖ್ಯಾತಿ ಪಡೆದುಕೊಂಡಿದ್ದಾನೆ. ವಿಡಿಯೋ ಮೂಲಕ ಹುಡುಗಿಯರನ್ನು ಮರಳು ಮಾಡುವುದೇ ಈತನ ಕೆಲಸ. ಈತ ಖ್ಯಾತ ಕೀಝಪೆರೂರ್ ಕೃಷ್ಣ ದೇವಸ್ಥಾನದ ಸಮೀಪದ ಚಿರಾಯಿಂಕೀಜುವಿನ ನಿವಾಸಿ. ಕೇರಳದ ಥಂಪನೂರ್ ಪೊಲೀಸರು ಈತನನ್ನು ಕಳೆದ ಆಗಸ್ಟ್ನಲ್ಲಿ ಬಂಧಿಸಿದ್ದರು.
ನಾನು ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿ, ಚಾನೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿ ನಂಬಿಸುತ್ತಿದ್ದ. ಆದರೆ, ಆತ ಓದಿರುವುದು ದ್ವಿತೀಯ ಪಿಯುಸಿ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಯಿತು. ರೀಲ್ಸ್ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿರುತ್ತಿದ್ದ ವಿನೀತ್, ಜಾಲತಾಣ ಮೂಲಕ ಹುಡುಗಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಪರಿಚಯ ಪ್ರೇಮಕ್ಕೆ ತಿರುಗಿದಾಗ ಹುಡಗಿಯರ ಮೇಲೆ ಅನುಮಾನ ಪಡುತ್ತಿದ್ದ. ಬೇರೊಬ್ಬರ ಜೊತೆ ನಿನಗೆ ಸಂಬಂಧ ಇದೆ ಎಂದು ಕತೆ ಕಟ್ಟುತ್ತಿದ್ದ. ಆತನನ್ನು ನಂಬಿಸಲು ಆತನ ಬಲೆಗೆ ಬಿದ್ದ ಹುಡುಗಿಯರು ತಮ್ಮ ಈಮೇಲ್ ಮತ್ತು ಇನ್ಸ್ಟಾಗ್ರಾಂ ಐಡಿ ಹಾಗೂ ಪಾಸ್ವರ್ಡ್ ನೀಡುತ್ತಿದ್ದರು. ನಂತರ ಹುಡುಗಿಯರು ಇನ್ಸ್ಟಾಗ್ರಾಂ ಖಾತೆಗಳನ್ನು ವಿನೀತ್ ನಿರ್ವಹಿಸುತ್ತಿದ್ದ. ತನ್ನ ಸೂಚನೆಗಳನ್ನು ಅನುಸರಿಸಲು ಹುಡುಗಿಯರನ್ನು ಒತ್ತಾಯಿಸುತ್ತಿದ್ದ.
ಹೊಸ ಕಾರು ಖರೀದಿ ಮಾಡಿದ್ದೇನೆ. ಒಂದು ಡ್ರೈವ್ ಹೋಗೋಣ ನನಗೆ ಕಂಪನಿ ಕೊಡಿ ಎಂದು ಆಹ್ವಾನಿಸುತ್ತಿದ್ದ. ಆತನ ಆಹ್ವಾನವನ್ನು ನಂಬಿ ಆತನೊಂದಿಗೆ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ತಿರುವನಂತಪುರದಲ್ಲಿರುವ ಲಾಡ್ಜ್ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸುಗುತ್ತಿದ್ದ. ವಿದ್ಯಾರ್ಥಿನಿಯೊಬ್ಬಳು ನಡೆದ ಘಟನೆಯನ್ನು ತನ್ನ ಸ್ನೇಹಿತೆಯೊಬ್ಬಳಿಗೆ ಹೇಳಿದ ಬಳಿಕ ಆಕೆ ದೂರು ದಾಖಲಿಸಿದಳು. ತಕ್ಷಣ ತನಿಖೆ ಆರಂಭಿಸಿದ ಪೊಲೀಸರು ವಿನೀತ್ನನ್ನು ಬಂಧಿಸಿ, ಆತನ ಮೊಬೈಲ್ ವಶಕ್ಕೆ ಪಡೆದಿದ್ದರು.
ಕೇರಳ ಪೊಲೀಸರ ಸಂದೇಶ
ವಿನೀತ್ ಮುಖವಾಡ ಬಯಲಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕೇರಳ ಪೊಲೀಸರು ಸಂದೇಶವೊಂದನ್ನು ಹಂಚಿಕೊಂಡಿದ್ದರು. ಹೊಳೆಯುವುದೆಲ್ಲ ಚಿನ್ನವಲ್ಲ ಎಂಬ ಗಾದೆ ಮಾತಿನ ಮೂಲಕ ಜಾಲತಾಣದಲ್ಲಿ ಇರುವವರೆಲ್ಲ ಸಾಚರಲ್ಲ ಎಂಬ ಸಂದೇಶವನ್ನು ರವಾನಿಸಿದ್ದರು. ವಂಚಕರಿರುತ್ತಾರೆ ಎಚ್ಚರಿಕೆ ವಹಿಸಿ, ಇಲ್ಲವಾದಲ್ಲಿ ನಿಮ್ಮ ಮಾನ ಮರ್ಯಾದೆ ಬೀದಿಗೆ ಬೀಳಬಹುದು. ಬಣ್ಣದ ವೇಷ ಹಾಕಿಕೊಂಡು, ವ್ಯಕ್ತಿತ್ವವನ್ನು ಕೊಂದು ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಕೆಲ ನಯವಂಚಕರು ಕಾದು ಕುಳಿತಿರುತ್ತಾರೆ. ಹೀಗಾಗಿ ಗೊತ್ತಿಲ್ಲದವರ ಫ್ರೆಂಡ್ ರಿಕ್ವೆಸ್ಟ್ಗೆ ಓಕೆ ಅನ್ನಬೇಡ ಅಥವಾ ನಕಲಿ ಪ್ರೊಫೈಲ್ಗನ್ನು ಅನುಸರಿಸಬೇಡಿ ಎಂದು ವಿನೀತ್ ಫೋಟೋ ಬಳಸಿ ಸಲಹೆ ನೀಡಿದ್ದರು. (ಏಜೆನ್ಸೀಸ್)
ಹೊಳೆಯುವುದೆಲ್ಲ ಚಿನ್ನವಲ್ಲ! Instagram ರೀಲ್ಸ್ ಸ್ಟಾರ್ ಬಂಧನದ ಬೆನ್ನಲ್ಲೇ ಪೊಲೀಸರ ಸಂದೇಶ ವೈರಲ್
ಒಂದೇ ದಿನದಲ್ಲಿ 200 ಕೋಟಿಗೂ ಅಧಿಕ ಮಂದಿಯಿಂದ ರಿಷಿ ಸುನಕ್, ಅಕ್ಷತಾರ ಹುಡುಕಾಟ! ಹೀಗೊಂದು ದಾಖಲೆ
ಬಾನಯಾನದಲ್ಲೂ ಮೊಳಗಿದ ಕನ್ನಡ ಗಾನ: ಕೋಟಿ ಕಂಠ ಗಾಯನ ಅಭಿಯಾನಕ್ಕೆ ಸ್ಪೈಸ್ ಜೆಟ್ ಬೆಂಬಲ