More

    ಯಾತ್ರೆ ಮೊಟಕುಗೊಳಿಸಿ ಊರಿಗೆ ತೆರಳಿ – ಶ್ರೀಶೈಲ ಜಗದ್ಗುರು

    ಬೆಳಗಾವಿ: ಭಾವಾವೇಶಕ್ಕೆ ಒಳಗಾಗಿ ವಾಸ್ತವಿಕ ಪರಿಸ್ಥಿತಿ ಅಲಕ್ಷಿಸಿ ಭಕ್ತಿಯ ಹೆಸರಿನಲ್ಲಿ ಹುಚ್ಚು ಧೈರ್ಯ ಪ್ರದರ್ಶಿಸಲು ಪ್ರಯತ್ನಿಸಬಾರದು. ಯಾವೆಲ್ಲ ಭಕ್ತರು ಶ್ರೀಶೈಲ ಯಾತ್ರೆ ಮಾಡಲು ಸಂಕಲ್ಪ ಮಾಡಿದ್ದರೋ ಅವರೆಲ್ಲ ಸದ್ಯ ಕರೊನಾ ವೈರಸ್ ಹಿನ್ನೆಲೆಯಲ್ಲಿ ಯಾತ್ರೆ ಮೊಟಕುಗೊಳಿಸುವುದೇ ಸೂಕ್ತ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

    ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ದೇವಸ್ಥಾನಗಳು ಮನುಕುಲದ ಕಲ್ಯಾಣ ಕೇಂದ್ರಗಳಾಗಿದ್ದು, ಅವುಗಳೇ ಮನುಷ್ಯರ ಮರಣಕ್ಕೆ ಕಾರಣವಾಗಬಾರದು ಎಂದರು.
    ಶೀಘ್ರ ಮರಳಿ: ಈಗಾಗಲೇ ನಾಡಿನ ವಿವಿಧೆಡೆಯಿಂದ ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ಆಗಮಿಸುತ್ತಿದ್ದಾರೆ.

    ಮಾರ್ಗಮಧ್ಯದಲ್ಲಿರುವ ಅವರೆಲ್ಲರೂ ಮರಳಿ ಅವರುಗಳ ಊರಿಗೆ ತೆರಳುವುದು ಒಳ್ಳೆಯದು. ಅಥವಾ ವಾಹನಗಳ ಮೂಲಕ ನೇರವಾಗಿ ಕ್ಷೇತ್ರಕ್ಕೆ ಹೋಗಿ ದೇವರ ದರ್ಶನ ಪಡೆದು ತಕ್ಷಣ ತಮ್ಮ ಗ್ರಾಮಕ್ಕೆ ಬರುವುದು ಉತ್ತಮ. ಅನೇಕರು ಕಂಬಿಗಳನ್ನು ತೆಗೆದುಕೊಂಡು ಹೊರಟವರು, ಮರಳಿ ಬರಲು ಸಾಧ್ಯವಿಲ್ಲದವರು ದಾರಿಯಲ್ಲಿ ವೈದ್ಯರ ಸಲಹೆ ಪಡೆದು ಕರೊನಾ ಸೋಂಕು ಬಾರದಂತೆ ಎಚ್ಚರಿಕೆಯ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು.

    ಬಳಿಕವೇ ಶ್ರೀಶೈಲಕ್ಕೆ ಹೋಗಿ ತಮ್ಮ ಪಾರಂಪರಿಕ ವಿಧಿವಿಧಾನಗಳನ್ನು ಪೂರೈಸಿ ಆದಷ್ಟು ಶೀಘ್ರ ವಾಪಸ್ಸು ಊರು ಸೇರಬೇಕು ಎಂದರು.
    ಸುದ್ದಿಗೋಷ್ಠಿಯಲ್ಲಿ ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಇದ್ದರು.

    ವೈದ್ಯರ ತಂಡ ನಿಯೋಜನೆಗೆ ಮನವಿ

    ಶ್ರೀಶೈಲ ಪೀಠದಿಂದಲೂ ಬೇರೆ ಬೇರೆ ಸ್ಥಳಗಳಲ್ಲಿ ವೈದ್ಯರ ತಂಡ ನಿಯೋಜಿಸಿ ಭಕ್ತರ ಆರೋಗ್ಯ ಕಾಪಾಡುವ ಕಾರ್ಯ ಮಾಡಲಾಗಿದೆ. ಅಲ್ಲದೆ, ಅಲ್ಲಲ್ಲಿ ನೀರಿನ ಹಾಗೂ ಔಷಧ ವ್ಯವಸ್ಥೆಯನ್ನೂ ಮಾಡಲಾಗಿದೆ. ಯುಗಾದಿಯ ಸಂದರ್ಭದಲ್ಲಿ ಪ್ರತಿವರ್ಷ ಕರ್ನಾಟಕದಿಂದ ಹತ್ತು ಲಕ್ಷಕ್ಕಿಂತ ಹೆಚ್ಚು ಭಕ್ತರು ಶ್ರೀಶೈಲದಲ್ಲಿ ಸೇರುತ್ತಾರೆ.

    ಇದೀಗ ಕರೊನಾ ವೈರಸ್ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಬರುವವರನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರವು ಈ ಸಮಯದಲ್ಲಿ ಶ್ರೀಶೈಲಕ್ಕೆ ವೈದ್ಯರ ತಂಡ ನಿಯೋಜಿಸಬೇಕು. ಅಗತ್ಯ ಮಾಸ್ಕ್ ಹಾಗೂ ಔಷಧ ಕಳುಹಿಸಿ ಆಗಮಿಸುವ ಜನರಿಗೆ ಕರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಶ್ರೀಶೈಲ ಜಗದ್ಗುರುಗಳು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts