ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ಈ ಕದನದಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ ದೇಶ ನಮಿಸಿದೆ. ಪಾಕ್ ವಿರುದ್ಧ ಸಮರದಲ್ಲಿ ಹೋರಾಡಿದ ವೀರಾಗ್ರಣಿಗಳಿಗೆ ರಾಷ್ಟ್ರಪತಿ ದ್ರೌಪದಿ ಮುಮು ಗೌರವ ಸಲ್ಲಿಸಿದ್ದಾರೆ. ಅವರು ತಮ್ಮ ತವರು ರಾಜ್ಯ ಒಡಿಶಾಕ್ಕೆ ಮೂರು ದಿನ ಪ್ರವಾಸ ಕೈಗೊಂಡಿದ್ದು, ಒಡಿಶಾ ಹೈಕೋರ್ಟ್ನ 75ನೇ ವರ್ಷದ ಆಚರಣೆ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯೋಧರನ್ನು ಸ್ಮರಿಸಿದರು.
ಕಾರ್ಗಿಲ್ ಯುದ್ಧದ ಸೇನಾನಿಗಳು ಯಾವತ್ತೂ ಜನತೆಗೆ ಸ್ಪೂರ್ತಿಯಾಗಿದ್ದಾರೆ. ಈ ಯೋಧರಿಗೆ ದೇಶ ನಮಿಸುತ್ತದೆ. ಜೈ ಹಿಂದ್ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹುತಾತ್ಮರನ್ನು ಸ್ಮರಿಸಿದ್ದಾರೆ.
ಕಾಂಗ್ರೆಸ್ ಕೂಡ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿ ಟ್ವೀಟ್ ಮಾಡಿದೆ. ಆದರೆ, ಕಾಂಗ್ರೆಸ್ನ ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್; ಯುಪಿಎ ಅಧಿಕಾರದಲ್ಲಿದ್ದಾಗ ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಿಲ್ಲ ಎಂದು ಟೀಕಿಸಿದ್ದಾರೆ. ಪಾಕ್ ಸೇನೆಯನ್ನು ಬಗ್ಗುಬಡಿದ ಭಾರತದ ಸೇನೆ, 1999ರ ಜುಲೈ 26ರಂದು ಕಾರ್ಗಿಲ್ ಶ್ರೇಣಿಯ ಟೈಗರ್ ಹಿಲ್ ಅನ್ನು ಮರುವಶಪಡಿಸಿಕೊಂಡಿತು.
ಅಗತ್ಯ ಬಿದ್ದರೆ ಗಡಿ ದಾಟಲು ಸಿದ್ಧ
ದೇಶದ ಗೌರವ ಮತ್ತು ಘನತೆ ರಕ್ಷಣೆಗಾಗಿ ನಾವು ಯಾವುದೇ ಕ್ರಮಕ್ಕೆ ಸಿದ್ಧ. ಅಗತ್ಯ ಬಿದ್ದರೆ ನಮ್ಮ ಯೋಧರು ಗಡಿ ದಾಟಲು ಸಿದ್ಧ. ಇಂಥ ಪ್ರಸಂಗ ಎದುರಾದರೆ ನಾಗರಿಕರು ಸೇನೆಯ ಬೆಂಬಲಕ್ಕೆ ನಿಲ್ಲಬೇಕು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು. ಲಡಾಖ್ನ ದ್ರಾಸ್ನಲ್ಲಿ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಬುಧವಾರ ಆಯೋಜಿಸಿದ್ದ 24ನೇ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಶ್ಮೀರ ವಿವಾದ ಇತ್ಯರ್ಥದ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿ ಬೆನ್ನಿಗೆ ಚೂರಿಹಾಕಿದ ಪಾಕ್, ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು. ಆದರೆ, ಆಪರೇಷನ್ ವಿಜಯ ಮೂಲಕ ಭಾರತೀಯ ಸೇನೆಯು ಪಾಕ್ಗೆ ತಕ್ಕ ಶಾಸ್ತಿ ಮಾಡಿತು.
ಈ ಯುದ್ಧದಲ್ಲಿ ನವವಿವಾಹಿತರು, ವಿವಾಹ ನಿಗದಿಯಾಗಿದ್ದ ಅನೇಕ ಯೋಧರು ಹುತಾತ್ಮರಾದರು. ವೈಯಕ್ತಿಕ ಬದುಕಿಗಿಂತ ದೇಶ ಮಿಗಿಲೆಂದು ತ್ಯಾಗ ಮಾಡಿದ ಈ ಧೀರ ಸೇನಾನಿಗಳಿಗೆ ಸಲಾಂ. ಇಂಥ ಧೀರ ಯೋಧರ ಸ್ಪೂರ್ತಿ ಈವತ್ತಿಗೂ ಭಾರತೀಯ ಸೇನೆ ಸೇನೆಯಲ್ಲಿ ಇದೆ. ನಮ್ಮ ಯೋಧರು ದೇಶದ ಸುರಕ್ಷತೆಗೆ ಬದ್ಧರಾಗಿದ್ದು, ಯಾವುದೇ ತ್ಯಾಗಕ್ಕೆ ಸಿದ್ಧರಿದ್ದಾರೆ ಎಂದರು. ಭೂಸೇನೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಇನ್ನಿತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಮಧ್ಯೆ, ಕಾರ್ಗಿಲ್ನಲ್ಲಿ ವಿಜಯ ದಿವಸದ ದಿನವೇ ಮಹಿಳಾ ಪೊಲೀಸ್ ಠಾಣೆ ಚಾಲನೆಗೊಂಡಿದೆ.
ವಿಜಯ ದಿವಸ ವಿವಿಧೆಡೆ ಆಚರಣೆ
ಕಾರ್ಗಿಲ್ ವಿಜಯ ದಿನದ ಅಂಗವಾಗಿ ಬೆಂಗಳೂರಿನ ಇಂದಿರಾಗಾಂಧಿ ಕಾರಂಜಿ ಉದ್ಯಾನದಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ಹುತಾತ್ಮ ಯೋಧರ ಪ್ರತಿಮೆಗಳಿಗೆ ಮಾಲಾರ್ಪಣೆ ಸಲ್ಲಿಸಿದರು.
ಕಾರ್ಗಿಲ್ ಯೋಧರ ಬುದುಕು ಯುವಕರಿಗೆ ಸ್ಪೂರ್ತಿಯಾಗಿದೆ. ಕಾರ್ಗಿಲ್ ಯುದ್ದದಲ್ಲಿ ಯೋಧರು ದುರ್ಗಮ ಸ್ಥಳದಲ್ಲಿ ಹೋರಾಡಿ ದೇಶವನ್ನು ರಕ್ಷಿಸಿದ್ದಾರೆ. ತ್ಯಾಗ, ಬಲಿದಾನವಾದ ಎಲ್ಲ ಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ.
| ಸಿದ್ದರಾಮಯ್ಯ ಮುಖ್ಯಮಂತ್ರಿ