ಎಚ್.ಡಿ.ಕೋಟೆ: ಮತಾಂತರಗೊಂಡ ಬುಡಕಟ್ಟು ಜನರನ್ನು ಎಸ್ಟಿ ಪಟ್ಟಿಯಿಂದ ಕೈಬಿಡುವಂತೆ ಒತ್ತಾಯಿಸಿ ಗಿರಿಜನ ಸಂಸ್ಕೃತಿ ಸಂರಕ್ಷಣಾ ಸಮ್ಮೇಳನ ಕಾರ್ಯಕ್ರಮವನ್ನು ನ.26 ರಂದು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗಿರಿಜನ ಸುರಕ್ಷಾ ವೇದಿಕೆ ಅಧ್ಯಕ್ಷ ಗಣೇಶ್ ತಿಳಿಸಿದರು.
ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಸ್ವಾತಂತ್ರ್ಯ ಪೂರ್ವದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರ ನಡೆಸಿ ಪರಿಶಿಷ್ಟ ಪಂಗಡದ ಜನರಿಗೆ, ಆಸೆ, ಆಮಿಷಗಳನ್ನು ಒಡ್ಡಿ ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರ ಮಾಡಲಾಗುತ್ತಿದೆ. ಮೂಲ ಆದಿವಾಸಿಗಳ ಬುಡಕಟ್ಟುಗಳಾದ ನಮ್ಮ ಆಚಾರ ಸಂಸ್ಕೃತಿ ನಂಬಿಕೆ ಎಲ್ಲೋ ಒಂದು ಕಡೆ ನಶಿಸುತ್ತಿದೆ. ಹಾಗಾಗಿ, ಮತಾಂತರಗೊಂಡವರಿಗೆ ಪರಿಶಿಷ್ಟ ಪಂಗಡದ ಸಕಲ ಸೌಲಭ್ಯಗಳನ್ನು ನೀಡುವುದನ್ನು ನಿಲ್ಲಿಸಬೇಕು. ಕೂಡಲೇ ಪರಿಶಿಷ್ಟ ಪಂಗಡದ ಪಟ್ಟಿಯಿಂದ ಮತಾಂತರಗೊಂಡವರನ್ನು ತೆಗೆದು ಹಾಕಲು ಸಂವಿಧಾನ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.
ಗಿರಿಜನ ಸುರಕ್ಷಾ ವೇದಿಕೆ ಸದಸ್ಯೆ ಪುಟ್ಟಮ್ಮ, ಮುಖಂಡರಾದ ವಿಠಲ ಶಿವಣ್ಣ, ಕೌಸಲ್ಯಾ, ವಾಮನ್ ಇದ್ದರು.