ಬಸವನಬಾಗೇವಾಡಿ: ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದ ಪಾದಯಾತ್ರೆ ಶನಿವಾರ ಮಧ್ಯಾಹ್ನ ಪಟ್ಟಣಕ್ಕೆ ಆಗಮಿಸಿತು.
ಪಟ್ಟಣದ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿದ ಬಳಿಕ ಶ್ರೀ ಬಸವೇಶ್ವರ ವೃತ್ತದಲ್ಲಿ ವಿವಿಧ ಘೋಷಣೆ ಕೂಗಿದರು.
ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಮಾತನಾಡಿ, ತಾಳಿಕೋಟೆ ತಾಲೂಕಿನ ಹಡಿಗಿನಾಳ ಮಾರ್ಗದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮೇಲ್ಮಟ್ಟದ ಸೇತುವೆಗೆ ಬಸ್ ನಿಲ್ದಾಣವರೆಗೆ ನೇರ ರಸ್ತೆ ಕಲ್ಪಿಸಬೇಕಲ್ಲದೆ, ಎರಡೂ ಬದಿಗೆ ಸರ್ವಿಸ್ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸಿದರು. ತಾಳಿಕೋಟೆಯಿಂದ ವಿಜಯಪುರ ನಗರದ ಜಿಲ್ಲಾಧಿಕಾರಿಗಳವರೆಗೆ ಪಾದಯಾತ್ರೆಯಲ್ಲಿ ಹೊರಟಿರುವುದಾಗಿ ತಿಳಿಸಿದರು.
ಶನಿವಾರ ಬಸವನ ಬಾಗೇವಾಡಿಯಿಂದ ಮನಗೂಳಿವರೆಗೆ ಪಾದಯಾತ್ರೆ ನಡೆಸಿ ಅಲ್ಲಿ ವಾಸ್ತವ್ಯ ಮಾಡಲಾಗುವುದು. ಭಾನುವಾರ ಮನಗೂಳಿಯಿಂದ ವಿಜಯಪುರ ನಗರದವರೆಗೆ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ನಿಂಗನಗೌಡ ದೇಸಾಯಿ, ರವಿ ಕಟ್ಟಿಮನಿ, ನದಿಮ್ ಕಡಿ, ಮಹೇಶ ಗೊಗಿ, ಸುರೇಶ ಹಜೇರಿ, ಶಿವರಾಜ ಹಜೇರಿ, ರಮಜಾನ್ ಪಿಂಜಾರ, ದೇವೇಂದ್ರ ಮನ್ನಾಳ, ಮಲಿಕ್ ಪಟೇಲ, ರಮೇಶ ಮೊಹಿತೆ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.