ಉಳ್ಳಾಲ: ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದ ಟ್ರಾಲ್ಬೋಟ್ ಕಲ್ಲಿಗೆ ಡಿಕ್ಕಿ ಹೊಡೆದು ಮುಳುಗಿದ್ದು, ಬೋಟ್ನಲ್ಲಿದ್ದ ಆರು ಮೀನುಗಾರರನ್ನು ರಕ್ಷಿಸಲಾಗಿದೆ.
ಉಳ್ಳಾಲದ ನಯನಾ ಸುವರ್ಣ ಎಂಬುವರಿಗೆ ಸೇರಿದ ಬೋಟ್ ದುರಂತಕ್ಕೀಡಾಗಿದೆ. ನಯನಾ ಅವರ ಪತಿ ಪ್ರವೀಣ್ ಸುವರ್ಣ ಬೋಟ್ ಚಲಾಯಿಸುತ್ತಿದ್ದರು. ಉತ್ತರ ಪ್ರದೇಶ ಮೂಲದ ಮೀನುಗಾರರಾದ ಸಮರ ಬಹಾದ್ದೂರ್, ರಾಮ್ ಮನೋಜ್, ರೋಹಿತ್, ಪ್ರಕಾಶ ಮತ್ತು ವಾಸು ಬೋಟ್ನಲ್ಲಿದ್ದರು.
ಇವರು ಗುರುವಾರ ಸಂಜೆ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ಮುಗಿಸಿ ಶುಕ್ರವಾರ ಮುಂಜಾನೆ ನಾಲ್ಕು ಗಂಟೆ ವೇಳೆಗೆ ಉಳ್ಳಾಲ ಸಮುದ್ರ ತೀರದ ಮೂಲಕ ದಡಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಬೋಟಿನ ಪ್ರೊಫೈಲರ್ಗೆ ಸಮುದ್ರದಲ್ಲಿದ್ದ ವಸ್ತು ತಾಗಿದ ಪರಿಣಾಮ ಬೋಟ್ ನಿಂತಿದೆ. ಸಮುದ್ರದ ತೆರೆಗಳ ಅಬ್ಬರಕ್ಕೆ ಸಿಲುಕಿದ ಬೋಟ್ ಕಡಲ್ಕೊರೆತದ ಶಾಶ್ವತ ಕಾಮಗಾರಿಯಾದ ರೀಫ್ ಬಳಿ ಹಾಕಿದ್ದ ಸರ್ವೇ ಕಲ್ಲಿಗೆ ಬಡಿದು ಹಾನಿಗೀಡಾಗಿ ಮುಳುಗಿದೆ ಎನ್ನಲಾಗಿದೆ. ಮುಳುಗುತ್ತಿದ್ದ ಬೋಟ್ನಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.