ಹಾವೇರಿ: ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರ ಪ್ರಯಾಣಕ್ಕೆ ಸಮಸ್ಯೆಯಾಗದಂತೆ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದರು.
ಉದ್ದೇಶಿತ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪರ್ಯಾಯ ಸಾರಿಗೆ ವ್ಯವಸ್ಥೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ವಾಹನಗಳು, ಟೆಂಪೋ, ಶಾಲೆ ಬಸ್ಗಳನ್ನು ಬಳಸಿಕೊಂಡು ಪ್ರಯಾಣಿಕರಿಗೆ ಸೇವೆ ಒದಗಿಸುವಂತೆ ಸೂಚಿಸಿದರು.
ವೈದ್ಯಕೀಯ ಕಾರಣ ಮತ್ತು ಅತ್ಯವಶ್ಯಕ ಕಾರ್ಯಗಳಿಗೆ ಹೋಗುವವರಿಗೆ ತುರ್ತಾಗಿ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ತೊಂದರೆಯಾಗದಂತೆ ಆದ್ಯತೆ ಮೇಲೆ ಸಾರಿಗೆ ವ್ಯವಸ್ಥೆ ಕೈಗೊಳ್ಳಬೇಕು ಎಂದರು.
ರೂಟ್ ಪ್ಲ್ಯಾನ್ ಮಾಡಿ: ಸಾರಿಗೆ ವ್ಯವಸ್ಥೆಯ ರೂಟ್ ಪ್ಲ್ಯಾನ್ ಮಾಡಲು ವಿಭಾಗೀಯ ನಿಯಂತ್ರಣಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಡಿಡಿಪಿಐ ಕ್ರಮವಹಿಸಬೇಕು ಎಂದರು.
ಖಾಸಗಿ ಶಾಲೆ, ಕಾಲೇಜ್ಗಳ ಬಸ್ಗಳ ಪಟ್ಟಿ ತಯಾರಿಸಿ ಆಯಾ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅವಶ್ಯವಿರುವಷ್ಟು ಬಸ್ಗಳನ್ನು ಹೊರತುಪಡಿಸಿ ಉಳಿದ ಬಸ್ಗಳನ್ನು ಬಳಸಿಕೊಳ್ಳಬೇಕು. ಭಾರಿ ವಾಹನಗಳ ಲೈಸೆನ್ಸ್ ಹೊಂದಿದ ವಾಹನ ಚಾಲಕರಿಗೆ ಬಸ್ಗಳನ್ನು ಓಡಿಸಲು ವ್ಯವಸ್ಥೆ ಮಾಡುವ ಬಗ್ಗೆ ಪರಿಶೀಲಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚಿಸಿದರು.
ಜಿಲ್ಲೆಯ ತಾಲೂಕುವಾರು ಮ್ಯಾಕ್ಸಿಕ್ಯಾಬ್ಗಳ ಮಾಹಿತಿ ಪಡೆದ ಅವರು, ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಖಾಸಗಿ ವಾಹನಗಳನ್ನು ಓಡಿಸಬೇಕು ಎಂದು ವಿನಂತಿಸಿದರು.
ಖಾಸಗಿ ವಾಹನ ಮಾಲೀಕರು ಸಭೆಗೆ ಮಾಹಿತಿ ನೀಡಿ, ಪ್ರತಿ ತಾಲೂಕಿನಲ್ಲಿ 50ರಿಂದ 60ಮ್ಯಾಕ್ಸಿಕ್ಯಾಬ್ಗಳು ಲಭ್ಯವಿವೆ. ವಿದ್ಯಾರ್ಥಿಗಳಿಂದ ಶೇ. 50ರಷ್ಟು ದರ ಪಡೆದು ವಾಹನ ಓಡಿಸಲಾಗುವುದು. ಹಳ್ಳಿಗಳಿಂದ ಹೋಬಳಿ ಕೇಂದ್ರ ಹಾಗೂ ಹೋಬಳಿ ಕೇಂದ್ರಗಳಿಂದ ತಾಲೂಕು ಕೇಂದ್ರಗಳಿಗೆ ಖಾಸಗಿ ವಾಹನಗಳನ್ನು ಓಡಿಸಲಾಗುವುದು. ಹುಬ್ಬಳ್ಳಿ, ದಾವಣಗೆರೆ, ರಾಣೆಬೆನ್ನೂರ ಸೇರಿ ಜಿಲ್ಲೆಯ ಇತರ ಸ್ಥಳಗಳಿಗೆ ಪ್ರಯಾಣಿಕರ ದಟ್ಟಣೆ ಪರಿಗಣಿಸಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಸಾರಿಗೆ ಸಂಚಾರ ಇಂದಿನಿಂದ ಸ್ಥಗಿತ?: 6ನೇ ವೇತನ ಆಯೋಗದ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಸಾರಿಗೆ ನೌಕರರು ಬುಧವಾರದಿಂದ ನಡೆಸಲು ಉದ್ದೇಶಿಸಿರುವ ಮುಷ್ಕರದ ಬಿಸಿ ಹಾವೇರಿ ಜಿಲ್ಲೆಯಲ್ಲಿಯೂ ತಟ್ಟುವುದು ಬಹುತೇಕ ನಿಶ್ಚಿತವಾಗಿದೆ.
ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಏ. 7ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಜಿಲ್ಲೆಯ ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಬುಧವಾರ ಬೆಳಗ್ಗೆಯಿಂದ ಮುಷ್ಕರ ಆರಂಭಗೊಳ್ಳುತ್ತಿರುವುದರಿಂದ ಮಂಗಳವಾರ ರಾತ್ರಿ ದೂರದೂರುಗಳಿಗೆ ತೆರಳಬೇಕಿದ್ದ ಅನೇಕ ಬಸ್ ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಲಿಲ್ಲ. ಮಧ್ಯಾಹ್ನದ ಬಳಿಕ ಸಂಚರಿಸಬೇಕಿದ್ದ ಎಲ್ಲ ಬಸ್ಗಳು ಸ್ಥಗಿತಗೊಂಡಿವೆ. ಮಂಗಳವಾರ ಮಧ್ಯಾಹ್ನದಿಂದ ಹಾವೇರಿ ಜಿಲ್ಲೆಯಿಂದ ಬೆಂಗಳೂರು, ಮುಂಬೈ, ತಿರುಪತಿ, ಮೈಸೂರು, ಹೈದರಾಬಾದ್ ಸೇರಿ ವಿವಿಧ ಮಾರ್ಗಗಳ ಬಸ್ ಸಂಚಾರ ಆರಂಭಗೊಂಡಿಲ್ಲ. ಅಲ್ಲದೆ, ಬುಧವಾರ ಎಲ್ಲ ನೌಕರರು ಕರ್ತವ್ಯಕ್ಕೆ ಗೈರಾಗುವುದು ಬಹುತೇಕ ಖಚಿತ ಎಂಬಂತಾಗಿದೆ.
‘ಬುಧವಾರದಿಂದ ಸಾರಿಗೆ ನೌಕರರು ಮುಷ್ಕರ ನಡೆಸಲು ತಯಾರಿ ನಡೆಸಿದ್ದು, ಮಂಗಳವಾರ ಮಧ್ಯಾಹ್ನದಿಂದ ದೂರದೂರುಗಳಿಗೆ ಹೋಗುವ ಬಸ್ಗಳ ಚಾಲಕ, ನಿರ್ವಾಹಕರು ಕರ್ತವ್ಯಕ್ಕೆ ಬಂದಿಲ್ಲ. ಈ ಕುರಿತು ಜಿಲ್ಲಾಧಿಕಾರಿ, ಮೇಲಧಿಕಾರಿಗಳಿಗೆ ವರದಿ ನೀಡಲಾಗಿದೆ’ ಎಂದು ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ವಿ.ಎಸ್. ಜಗದೀಶ ಪ್ರತಿಕ್ರಿಯಿಸಿದರು.
ಮುಷ್ಕರದ ಅವಧಿಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ವಾಯವ್ಯ ಸಾರಿಗೆ ಬಸ್ಗಳ ಚಾಲಕರು ಬಸ್ ಓಡಿಸಲು ಮುಂದಾದರೆ ಪೊಲೀಸ್ ಇಲಾಖೆಯಿಂದ ಸೂಕ್ತ ರಕ್ಷಣೆ ನೀಡಲಾಗುವುದು. ಟೆಂಪೋ, ಮ್ಯಾಕ್ಸಿಕ್ಯಾಬ್ಗಳನ್ನು ಬಸ್ ನಿಲ್ದಾಣಗಳ ಹೊರಗಡೆ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಬೇಕು. ಈ ಕುರಿತು ಪೊಲೀಸ್ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಲಾಗುವುದು.
| ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ
ಸರ್ಕಾರದ ಸೂಚನೆಯಂತೆ ಮುಷ್ಕರದ ಅವಧಿಯಲ್ಲಿ ಒಪ್ಪಂದ ವಾಹನಗಳ(ಇಟ್ಞಠ್ಟಿಚ್ಚಠಿ ಇಚ್ಟ್ಟಚಜಛಿಠ) ತಾತ್ಕಾಲಿಕ ರಹದಾರಿ ನೀಡಲಾಗುವುದು. ಮಿನಿಬಸ್, ಮ್ಯಾಕ್ಸಿ ಕ್ಯಾಬ್, ಬಸ್ ಮಾಲೀಕರು ಹಾವೇರಿ ಮತ್ತು ರಾಣೆಬೆನ್ನೂರ ಪ್ರಾದೇಶಿಕ ಸಾರಿಗೆ ಕಚೇರಿಗೆ ಸಂರ್ಪಸಬಹುದು.
| ವಸೀಮಬಾಬಾ ಮುದ್ದೇಬಿಹಾಳ, ಪ್ರಾದೇಶಿಕ ಸಾರಿಗೆ ಅಧಿಕಾರಿ
ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಯಾವುದೇ ತೀರ್ವನವಾಗಿಲ್ಲ. ಆದಾಗ್ಯೂ ಮುಂಬರುವ ಮೂರ್ನಾಲ್ಕು ದಿವಸಗಳಲ್ಲಿ ಸಮಸ್ಯೆ ಇತ್ಯರ್ಥವಾಗುವ ಸಾಧ್ಯತೆಯಿದೆ.
| ಜಗದೀಶ, ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ