ಮಂಗಳೂರು: ಮಂಗಳೂರು ಜಂಕ್ಷನ್-ಯಶವಂತಪುರ ರೈಲು ಮಾರ್ಗದಲ್ಲಿ ರೈಲು ಪ್ರಯಾಣದೊಂದಿಗೆ ಪ್ರವಾಸೋದ್ಯಮಕ್ಕೆ ಉತ್ತೆ ೀಜನ ನೀಡುವ ಉದ್ದೇಶದಿಂದ ಆರಂಭಿಸಲಾಗಿರುವ ವಿಸ್ಟಾಡೋಮ್ ಕೋಚ್ ಹೊಂದಿರುವ ರೈಲಿಗೆ ಭಾನುವಾರ ಬೆಳಗ್ಗೆ ಚಾಲನೆ ನೀಡಲಾಯಿತು.
ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ರೈಲಿಗೆ ಹಸಿರು ನಿಶಾನೆ ತೋರಿಸಿದರು. 06540/06539 ರೈಲಿನಲ್ಲಿ ಪ್ರತಿದಿನ ಎರಡು ವಿಸ್ಟಾಡೋಮ್ ಕೋಚ್ಗಳು ಇರಲಿವೆ. ಮಂಗಳೂರಿನಿಂದ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಹೊರಟು ರಾತ್ರಿ 8.20ಕ್ಕೆ ಬೆಂಗಳೂರು ತಲುಪಿದರೆ, ಬೆಂಗಳೂರಿನಿಂದ ಬೆಳಗ್ಗೆ 11.30ಕ್ಕೆ ಹೊರಟು ಸಾಯಂಕಾಲ 5 ಗಂಟೆಗೆ ಮಂಗಳೂರಿಗೆ ಆಗಮಿಸಲಿದೆ.
ಮೊದಲ ಬಾರಿಗೆ ಪರಿಚಯಿಸುತ್ತಿರುವುದರಿಂದ ರೈಲಿನಲ್ಲಿ ಫೋಟೋ-ಸೆಲ್ಫಿಗಳದ್ದೇ ಕಲರವ ಕಂಡುಬಂತು. ಪ್ರಯಾಣಿಕರೊಂದಿಗೆ, ಅವರನ್ನು ನಿಲ್ದಾಣದವರೆಗೆ ಬಿಡಲು ಬಂದ ಸಂಬಂಧಿಕರು, ಸ್ನೇಹಿತರೂ ರೈಲಿನೊಳಗೆ ಫೋಟೋ, ಸೆಲ್ಫಿ ತೆಗೆಸಿಕೊಳ್ಳುತ್ತಿದ್ದರು. ಉದ್ಯೋಗ ಹಾಗೂ ಇತರ ಉದ್ದೇಶಗಳಿಗೆ ಬೆಂಗಳೂರಿಗೆ ತೆರಳುವವರೇ ಅಧಿಕ ಸಂಖ್ಯೆಯಲ್ಲಿದ್ದರು. ಮುಂಗಾರು ಮಳೆ, ಘಟ್ಟ ಪ್ರದೇಶದಲ್ಲಿ ಪ್ರಯಾಣದ ಅನುಭವ ಸವಿಯುವ ಆಸೆಯಲ್ಲಿ ಪ್ರಯಾಣಿಕರಿದ್ದರು.
ಘಟ್ಟದಲ್ಲಿ ಸಾಗುವಾಗ ಗಾಜಿನ ಮೂಲಕ ಹೊರಗಿನ ದೃಶ್ಯ ರಮಣೀಯವಾಗಿತ್ತು. ಮಳೆ ಪ್ರಯಾಣದ ಖುಷಿಯನ್ನು ಹೆಚ್ಚಿಸಿತ್ತು. ವಿಸ್ಟಾಡೋಮ್ ರೈಲು ಪ್ರಯಾಣ ನಿರೀಕ್ಷೆಗಿಂತ ಹತ್ತು ಪಟ್ಟು ಹೆಚ್ಚು ಖುಷಿ ನೀಡಿದೆ. ಪ್ರಯಾಣ ಮಜಾ ಕೊಟ್ಟಿದೆ.
ಹೇಮಂತ್ ಭಟ್ ಬೆಂಗಳೂರು ಉದ್ಯೋಗಿ
ಘಟ್ಟದ ಪ್ರಯಾಣ ಮನಸ್ಸಿಗೆ ಮುದ ನೀಡಿತು. ಆದರೆ, ಊಟ-ತಿಂಡಿ ಸಮಸ್ಯೆಯಾಗಿದೆ. ಬಹುತೇಕ ನಿಲ್ದಾಣಗಳಲ್ಲಿ ಗಂಟೆಗಳ ಕಾಲ ರೈಲು ನಿಲ್ಲುವುದರಿಂದ ಸಮಯ ವ್ಯರ್ಥವಾಗುತ್ತದೆ.
ಶ್ರೀನಿವಾಸ್ ನಾಯಕ್- ಶೈಲಾ ನಾಯಕ್ ಮಂಗಳೂರಿನ ದಂಪತಿ
ವಿಸ್ಟಾಡೋಮ್ ಪ್ರಯಾಣ ಅದ್ಭುತ ಅನುಭವ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ರೈಲು ಸಂಚರಿಸುವಾಗಿ ಕಾಣಸಿಗುವ ದೃಶ್ಯಗಳನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ. ಊಟ-ತಿಂಡಿ ಪೂರೈಕೆಗೆ ಆದ್ಯತೆ ನೀಡಬೇಕು.
ವಿನಾಯಕ್ ಕಾರವಾರದ ಪ್ರಯಾಣಿಕ