ಕಾರವಾರ: ಶೌಚಗೃಹಕ್ಕೆ ಸಂಬಂಧಿಸಿ ನಡೆದ ಗಲಾಟೆಯು ಅಂಗಡಿಯೊಂದಕ್ಕೆ ಬೆಂಕಿ ಹಾಕುವುದರೊಂದಿಗೆ ಮುಕ್ತಾಯವಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮಕ್ಕಣ್ಣ ರಂಗಪ್ಪ ಮಡಿವಾಳ ಅವರಿಗೆ ಸೇರಿದ ನಗರದ ಕುಂಠಿ ಮಹಾಮ್ಮಾಯಿ ದೇವಸ್ಥಾನ ಎದುರಿನ ಇಸ್ತ್ರಿ ಗೂಡಂಗಡಿ ಮಂಗಳವಾರ ರಾತ್ರಿ ಬೆಂಕಿ ಬಿದ್ದು ಸುಟ್ಟು ಹೋಗಿತ್ತು. ಇಸ್ತ್ರಿ ಮಾಡಲು ಗ್ರಾಹಕರು ನೀಡಿದ್ದ ಬಟ್ಟೆಗಳು ಉರಿದು ಹೋಗಿದ್ದವು.
ಅಂಗಡಿ ಮಾಲೀಕನ ಪಕ್ಕದ ಮನೆಯಾತನೇ ಅಂಗಡಿಗೆ ಬೆಂಕಿ ಹಾಕಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ಹಬ್ಬುವಾಡದ ಮಂಜುನಾಥ ವೆರ್ಣೇಕರ್ ಎಂಬಾತನ ವಿರುದ್ಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಣ್ಣ ಹಾಗೂ ಮಂಜುನಾಥ ಅವರಿರುವ ಹಬ್ಬುವಾಡದ ಚಾಳ(ಗುಂಪು ಮನೆಗಳು)ದ ನಾಲ್ಕೈದು ಮನೆಗಳಿಗೆ ಒಂದೇ ಶೌಚಗೃಹವಿದೆ. ಶೌಚಗೃಹದ ಬಳಕೆ ಸಂಬಂಧ ಮಂಗಳವಾರ ಬೆಳಗ್ಗೆ ಪರಸ್ಪರ ಜಗಳವಾಗಿತ್ತು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಮಂಜುನಾಥ ನಡು ರಾತ್ರಿ ಮಕ್ಕಣ್ಣ ಮಡಿವಾಳ ಅಂಗಡಿಗೆ ತೆರಳಿ ಬೆಂಕಿ ಹಾಕಿದ್ದು, ಸುಮಾರು 1500 ರೂ. ಮೌಲ್ಯದ ಬಟ್ಟೆಗಳು ಸುಟ್ಟಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅನಾರೋಗ್ಯದ ಕಾರಣದಿಂದ ಮತದಾನ ಮಾಡಿಲ್ಲ