ಬೆಳಗಾವಿ: ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿ ಇಬ್ಬರು ಪೊಲೀಸ್ ಪೇದೆಗಳ ಜತೆ ನಡೆದ ಗಲಾಟೆ, ಹಲ್ಲೆ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಅರೆ ಸೈನಿಕ ಪಡೆಯ ಯೋಧ ಸಚಿನ್ ಸಾವಂತ್ಗೆ ಚಿಕ್ಕೋಡಿಯ ವಿಚಾರಣಾ ನ್ಯಾಯಾಲಯ ಮಂಗಳವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ವಕೀಲ ವಿ.ಡಿ.ಪಾಟೀಲ ಹಾಗೂ ಸಿಆರ್ಪಿಎಫ್ಕಮಾಂಡೋಗಳು ಮಂಗಳವಾರ ಬೆಳಗಾವಿಯ ಹಿಂಡಲಗಾ ಜೈಲಿಗೆ ಆಗಮಿಸಿ, ಜೈಲರ್ಗೆ ಜಾಮೀನಿನ ಪ್ರತಿ ನೀಡಿ ಯೋಧ ಸಚಿನ್ನನ್ನು ಖಾನಾಪುರ ತಾಲೂಕಿನ ತೋರಗಾವಿ ಗ್ರಾಮದಲ್ಲಿರುವ ಸಿಆರ್ಪಿಎ್ ಕಮಾಂಡರ್ ಸೆಂಟರ್ಗೆ ಕರೆದುಕೊಂಡು ಹೋದರು.
ಯೋಧನ ವಿರುದ್ಧ ಐಪಿಸಿ ಸೆಕ್ಷನ್ -353, 323, 504 ಹಾಗೂ ಎಪಿಡೆಮಿಕ್ ಡಿಸಿಜಸ್ ಕಾಯ್ದೆ 1987ರ ಸೆಕ್ಷನ್ 3ರಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಸೆಕ್ಷನ್ಗಳು ಗಂಭೀರ ಸ್ವರೂಪದ್ದು ಮತ್ತು ಜಾಮೀನು ಸಿಗಲಾರದ ಸ್ವರೂಪದಲ್ಲಿ ಇತ್ತು. ಆದರೂ ಯೋಧ ದೇಶ ಸೇವೆಯಲ್ಲಿ ನಿರತನಾಗಿರುವ ಹಿನ್ನೆಲೆ ಪರಿಗಣಿಸಿ ನ್ಯಾಯಾಲಯ ಜಾಮೀನು ನೀಡಿದೆ. ಅಲ್ಲದೆ, ಸಾಕ್ಷಿಗಳನ್ನು ಹೆದರಿಸಬಾರದು, ತನಿಖೆಯಲ್ಲಿ ಪೊಲೀಸರಿಗೆ ಸಹಕಾರ ನೀಡಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ ಎಂದು ವಕೀಲರು ತಿಳಿಸಿದ್ದಾರೆ.
ಮಾಸ್ಕ್ ಹಾಕಿಕೊಳ್ಳದ ವಿಚಾರವಾಗಿ ಪೊಲೀಸ್ ಪೇದೆಗಳು ಹಾಗೂ ಯೋಧನ ಮಧ್ಯೆ ಏಪ್ರಿಲ್ 23ರಂದು ಗಲಾಟೆ ನಡೆದು, ಪರಸ್ಪರರು ಹಲ್ಲೆ ಮಾಡಿದ್ದರು. ಬಳಿಕ ಕರ್ತವ್ಯ ನಿರತ ಪೇದೆಗಳ ಮೇಲೆ ಹಲ್ಲೆ ಆರೋಪದಡಿ ಯೋಧನನ್ನು ಬಂಧಿಸಲಾಗಿತ್ತು. ಯೋಧ ಸಚಿನ್ ಸಾವಂತ್ಗೆ ಕೋಳ ಹಾಕಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಅರೆ ಸೈನಿಕ ಪಡೆಯ ಯೋಧ ಹಾಗೂ ಸದಲಗಾ ಠಾಣೆಯ ಪೊಲೀಸ್ ಪೇದೆಗಳ ಮಧ್ಯೆ ನಡೆದ ಹಲ್ಲೆ ಘಟನೆಯನ್ನು ತನಿಖೆ ಮಾಡುವಂತೆ ಗೃಹ ಇಲಾಖೆಯಿಂದ ಆದೇಶ ಬಂದಿದೆ. ಹೀಗಾಗಿ ಇಂದಿನಿಂದಲೇ (ಮಂಗಳವಾರದಿಂದ) ತನಿಖೆ ಆರಂಭಿಸಲಾಗಿದೆ.
|ರಾಘವೇಂದ್ರ ಸುಹಾಸ್
ಉತ್ತರ ವಲಯ ಐಜಿಪಿ, ಬೆಳಗಾವಿ