ಕೊಟ್ಟೂರು: ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಹೊತ್ತ ಹರಕೆ ಈಡೇರಿದ್ದರಿಂದ ಪಟ್ಟಣದ ಅಭಿಮಾನಿಯೊಬ್ಬರು ನ.9ರಂದು ಬೆಂಗಳೂರಿನಲ್ಲಿ ಖುದ್ದು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಹೊಸ ಬಟ್ಟೆ ಉಡುಗೊರೆಯಾಗಿ ನೀಡಿ ಖುಷಿಪಟ್ಟರು.
ಪಟ್ಟಣದಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿರುವ ಕೆಂಚಮ್ಮನಹಳ್ಳಿ ಕೊಟೇಶ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಇದೇ ಫೆಬ್ರವರಿಯಲ್ಲಿ ಮೈಲಾರದ ಮೈಲಾರಲಿಂಗೇಶ್ವರ ಸನ್ನಿಧಾನದಲ್ಲಿ ಹರಕೆ ಹೊತ್ತಿದ್ದರು. ಅದು ಈಡೇರಿದ ಹಿನ್ನೆಲೆಯಲ್ಲಿ ನ.9ರಂದು ಬೆಂಗಳೂರಿನಲ್ಲಿ ಅತ್ಯಂತ ಕಷ್ಟಪಟ್ಟು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದರು.
ಅಲ್ಲದೆ ಸಿಎಂ ಹಾಗೂ ಅವರ ಪತ್ನಿಗೂ ಹೊಸ ಬಟ್ಟೆ ಉಡುಗೊರೆ ನೀಡುತ್ತಿದ್ದಂತೆ ಸಿದ್ದರಾಮಯ್ಯ ಬೆರಗಾದರು. ಹರಕೆ ಹೊತ್ತಿದ್ದು, ಕೆಂಚಮ್ಮಹಳ್ಳಿಯಲ್ಲಿ ಕಾಣಿಕೆ ಕಟ್ಟಿ ದೋಣಿ ಸೇವೆ ಮಾಡಿಸಿದ್ದನ್ನು ಸಿದ್ದರಾಮಯ್ಯ ಶಾಂತವಾಗಿ ಆಲಿಸಿದರು.
ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರನ್ನು ತೋರಿಸಿದ ಸಿಎಂ ಸಿದ್ದರಾಮಯ್ಯ, ನಿನ್ನ ಏನೇ ಸಮಸ್ಯೆ ಇದ್ದರೂ ಇವರಿಗೆ ತಿಳಿಸು ಎಂದರು. ಅಲ್ಲದೆ ಸಿದ್ದರಾಮಯ್ಯ ಮತ್ತು ಸಂಗೊಳ್ಳಿ ರಾಯಣ್ಣ ಇರುವಂತಹ ಭಾವಚಿತ್ರ ಕೊಡುತ್ತಿದ್ದಂತೆ ಸಿಎಂ ತಬ್ಬಿಕೊಂಡು ಸರಳತೆ ಮೆರೆದರು. ನಾನು ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ. ಸಿದ್ದರಾಮಯ್ಯ ನನ್ನ ಹರಕೆ ಕೇಳಿ, ನಾನು ಕೊಟ್ಟ ಉಡುಗೊರೆ, ಫೋಟೋ ಸ್ವೀಕರಿಸಿದ್ದು ಖುಷಿ ನೀಡಿದೆ ಎಂದು ಕೊಟೇಶ ತಿಳಿಸಿದರು.