ಲೋಕಸಭೆ ಚುನಾವಣೆ ಮುಹೂರ್ತ ನಿಕ್ಕಿಯಾದ ಬಳಿಕ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ, ಜೆಡಿಎಸ್ ಮಿತ್ರಪಕ್ಷಗಳು ತಮ್ಮದೇ ಆದ ಪ್ರತ್ಯೇಕ ರಣತಂತ್ರ ರೂಪಿಸುತ್ತಿವೆ. ಪಕ್ಷದ ಸೈದ್ಧಾಂತಿಕ ನೆಲೆಗಟ್ಟು, ಅಸ್ತಿತ್ವ ಕಾಪಾಡುತ್ತಿರುವ ಮತ ವರ್ಗವನ್ನು ಕೇಂದ್ರೀಕರಿಸಿ ಪ್ರತ್ಯೇಕ ಅಸ್ತ್ರವನ್ನು ಬತ್ತಳಿಕೆಗೆ ಸೇರಿಸಿಕೊಂಡಿವೆ. ಕರ್ನಾಟಕದ ಮತಕಣದಲ್ಲಿ ಕುತೂಹಲ ಮೂಡಿಸಿರುವ ಈ ರಾಜಕೀಯ ತಂತ್ರಗಾರಿಕೆ ಲೆಕ್ಕಾಚಾರದ ಅವಲೋಕನ ಇಲ್ಲಿದೆ.
ಕಾಂಗ್ರೆಸ್ಗೆ ಗ್ಯಾರಂಟಿ ಬಲ
ಪಂಚ ಗ್ಯಾರಂಟಿಗಳೇ ರಾಜ್ಯ ಕಾಂಗ್ರೆಸ್ಗೆ ಬಲ. ಹೀಗಾಗಿಯೇ ಫೆಬ್ರವರಿಯಿಂದಲೇ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ನಡೆಸುತ್ತಿದೆ. ಆ ಮೂಲಕ ಮೋದಿ ಹೆಸರಿನ ಮೇಲೆ ಸಾಗುತ್ತಿರುವ ಲೋಕ ಕದನವನ್ನು ಗ್ಯಾರಂಟಿ ಹಳಿ ಮೇಲೆ ತರಲು ತಂತ್ರ ರೂಪಿಸಿದೆ.
ಕಾಂಗ್ರೆಸ್ನ ಇತರೆ ಅಸ್ತ್ರ
* ಕೇಂದ್ರ ರಾಜ್ಯಕ್ಕೆ ಸರಿಯಾದ ನೆರವು ನೀಡುತ್ತಿಲ್ಲ
* ತೆರಿಗೆ ಪಾಲನ್ನು ಕೊಡದೆ ಅನ್ಯಾಯ ಮಾಡುತ್ತಿದೆ
* ಚುನಾವಣಾ ಬಾಂಡ್ ಮೂಲಕ ಭ್ರಷ್ಟಾಚಾರ ಆರೋಪ
ಕೇಸರಿಪಡೆಗೆ ಮೋದಿ ರಕ್ಷೆ
ರಾಜ್ಯದ 28 ಕ್ಷೇತ್ರಗಳ ಅಭ್ಯರ್ಥಿಯೂ ಮೋದಿಯೇ ಎಂಬುದು ಬಿಜೆಪಿಯ ಲೋಕ ಸೂತ್ರ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣ, ವಂದೇಭಾರತ್ ರೈಲು, ರಾಷ್ಟ್ರೀಯ ಹೆದ್ದಾರಿ, ಮನೆ ಮನೆಗೆ ಕುಡಿಯುವ ನೀರು, ಜನೌಷಧ, ಅಭಿವೃದ್ಧಿ ಪರ ಆಡಳಿತದ ಸಾಧನೆಯನ್ನು ಬಿಜೆಪಿ ರಾಜ್ಯದ ಮತದಾರರ ಮುಂದಿಟ್ಟಿದೆ.
ಬಿಜೆಪಿಯ ಇನ್ನಿತರ ಅಸ್ತ್ರ
* ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ
* ರಾಮೇಶ್ವರಂ ಬಾಂಬ್ ಕೆಫೆ ಸ್ಫೋಟ ಪ್ರಕರಣ
* ಮಂಡ್ಯದ ಹನುಮಧ್ವಜ ತೆರವು ವಿವಾದ
* ಗ್ಯಾರಂಟಿಯಿಂದ ಅಭಿವೃದ್ಧಿಗಾಗಿರುವ ಹಿನ್ನಡೆ.
ಜೆಡಿಎಸ್ ಬತ್ತಳಿಕೆಯಲ್ಲಿ ಜೋಡಿ ಅಸ್ತ್ರ
ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಜೆಡಿಎಸ್ ಪ್ರಾದೇಶಿಕ ಹಾಗೂ ಒಕ್ಕಲಿಗ ಅಸ್ಮಿತೆ, ಮೋದಿ ವರ್ಚಸ್ಸನ್ನು ಚುನಾವಣಾ ಬಂಡವಾಳವಾಗಿಸಿಕೊಳ್ಳಲು ಬಯಸಿದೆ
ಜೆಡಿಎಸ್ನ ಲೆಕ್ಕಾಚಾರ
* ಪ್ರಾದೇಶಿಕ ಅಸ್ಮಿತೆ ಜತೆ ಮೋದಿ ಅಲೆ ಬಳಕೆ
* ವಿಧಾನಸಭೆ ಚುನಾವಣೆ ಸೋಲಿನ ಅನುಕಂಪ
* ದೇವೇಗೌಡರ ಕೊನೇ ಚುನಾವಣೆ ಎಂಬ ಅಸ್ತ್ರ
ಮೋದಿ ಸರ್ಕಾರ ರಾಜ್ಯಕ್ಕೆ ಕೊಟ್ಟ ಕೊಡುಗೆಗಳನ್ನು ಗಮನಿಸಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳನ್ನು ಜನರು ಗೆಲ್ಲಿಸುತ್ತಾರೆ. ಈ ಮೂಲಕ ರಾಜ್ಯಕ್ಕೆ ಮೋದಿಯವರ ಕೊಡುಗೆ ಏನು? ಎಂಬ ಸಿದ್ದರಾಮಯ್ಯನವರ ಪ್ರಶ್ನೆಗೆ ಉತ್ತರ ಕೊಡುತ್ತಾರೆ.
| ಬಿ.ವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಬುಧವಾರದೊಳಗೆ ರಣಕಣ ರೆಡಿ: ಇಂದು- ನಾಳೆ ಬಿಜೆಪಿ,ಜೆಡಿಎಸ್, ಕಾಂಗ್ರೆಸ್ ಸಭೆ
ಬೆಂಗಳೂರು: ಇನ್ನು ಮೂರು ದಿನದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ನ ಲೋಕಸಭಾ ಚುನಾವಣೆ ಅಭ್ಯರ್ಥಿಗಳು ಅಂತಿಮಗೊಳ್ಳಲಿದ್ದಾರೆ. ಸೋಮವಾರ ಅಥವಾ ಮಂಗಳವಾರ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಬುಧವಾರದೊಳಗೆ ಐವರು ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಅದೇ ರೀತಿ ಜೆಡಿಎಸ್ನ ಮೂರು ಸ್ಥಾನಗಳ ಅಭ್ಯರ್ಥಿ ಆಯ್ಕೆ ಆಗಬೇಕಿದ್ದು, ಸೋಮವಾರದ ಕಾರ್ಯಕಾರಿಣಿಯಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ. ಉಳಿದಂತೆ ಮಾ.19ರಂದು ಕಾಂಗ್ರೆಸ್ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, 20ರಂದು 21 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಏಳು ತಿಂಗಳ ಗರ್ಭಿಣಿ ಮಾಡೋ ಕೆಲಸನಾ ಇದು? ನಟಿ ಅಮಲಾ ಪೌಲ್ಗೆ ನೆಟ್ಟಿಗರ ತರಾಟೆ