ತಮಿಳುನಾಡಿನ ಪೊಲೀಸರು ಮೂವರು ವಂಚಕರನ್ನು ಬಂಧಿಸಿದ್ದಾರೆ. ಆದರೆ ಇವರು ಮಾಡಿದ ಅಪರಾಧ ಮಾತ್ರ ಇದೀಗ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಈ ಮೂವರು ಸೇರಿಕೊಂಡು ಕಡಲೂರು ಜಿಲ್ಲೆಯ ಪಣ್ರುಟ್ಟಿ ಎಂಬಲ್ಲಿ ನಕಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯನ್ನೇ ನಿರ್ಮಿಸಿದ್ದರು.
ಕಮಲ್ ಬಾಬು (19) ಎಂಬಾತ ಎಸ್ಬಿಐ ಮಾಜಿ ಉದ್ಯೋಗಿಯ ಮಗ. ಈತ ಕಂಪ್ಯೂಟರ್, ಲಾಕರ್, ಚಲನ್ಗಳು, ಫೋರ್ಜರಿ ಮಾಡಿದ ದಾಖಲೆಗಳನ್ನೆಲ್ಲ ಸಂಗ್ರಹಿಸಿಕೊಂಡಿದ್ದ. ವೆಬ್ಸೈಟ್ ಕೂಡ ಸೃಷ್ಟಿಸಿದ್ದ. ಹಾಗೇ ಎಸ್ಬಿಐನ ಪಣ್ರುಟ್ಟಿ ಬಜಾರ್ ಬ್ರ್ಯಾಂಚ್ ಎಂದು ಹೆಸರೂ ಕೊಟ್ಟಿದ್ದ.
ಇವನೊಂದಿಗೆ ಎ. ಕುಮಾರ್(42) ಮತ್ತು ಎಂ.ಮಾಣಿಕ್ಕಮ್ (53) ಎಂಬುವರೂ ಶಾಮಿಲಾಗಿದ್ದರು. ಈ ನಕಲಿ ಬ್ರ್ಯಾಂಚ್ನ್ನು ಎಪ್ರಿಲ್ನಲ್ಲಿ ತೆರೆಯಲಾಗಿತ್ತು. ಆದರೆ ಒಂದು ದಿನ ಎಸ್ಬಿಐನ ಗ್ರಾಹಕರೋರ್ವರು ಬೇರೊಂದು ಬ್ರ್ಯಾಂಚ್ನ ಮ್ಯಾನೇಜರ್ ಜತೆ ಪಣ್ರುಟ್ಟಿ ಶಾಖೆ ಬಗ್ಗೆ ಚರ್ಚಿಸಿದರು. ಅಷ್ಟೇ ಅಲ್ಲ, ಅಲ್ಲಿ ಹೋಗಿ ತಾವು ವ್ಯವಹಾರ ಮಾಡಿದ್ದಾಗಿ ಹೇಳಿ, ಈ ನಕಲಿ ಶಾಖೆಯಿಂದ ಕೊಟ್ಟಿದ್ದ ರಸೀದಿಯೊಂದನ್ನು ತೋರಿಸಿದರು.
ಗೊಂದಲಕ್ಕೀಡಾದ ಆ ಮ್ಯಾನೇಜರ್ ಕೂಡಲೇ ಕೆಲವು ಅಧಿಕಾರಿಗಳೊಂದಿಗೆ ಸೇರಿ ಪಣ್ರುಟ್ಟಿ ಶಾಖೆಗೆ ಭೇಟಿ ಕೊಟ್ಟಾಗ ಎಲ್ಲರೂ ಶಾಕ್ ಆಗಿದ್ದಾರೆ. ಇದನ್ನೂ ಓದಿ: ಸೋಬರ್ಸ್, ಕಪಿಲ್ ದೇವ್ ಸಾಲಿಗೆ ಸೇರಿದ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್
ನಕಲಿ ಶಾಖೆಯನ್ನು ಪಕ್ಕಾ ಉಳಿದ ಶಾಖೆಗಳಂತೆ ನಿರ್ಮಿಸಲಾಗಿತ್ತು. ಒಂದು ಬ್ಯಾಂಕ್ನಲ್ಲಿ ಇರಬೇಕಾದ ಎಲ್ಲ ವ್ಯವಸ್ಥೆಗಳೂ ಇದ್ದವು. ನಂತರ ಆ ಮ್ಯಾನೇಜರ್ ಪೊಲೀಸ್ ಕಂಪ್ಲೇಂಟ್ ನೀಡಿದರು. ಅದರಂತೆ ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ.
ಕಮಲ್ ಬಾಬು ತಂದೆ-ತಾಯಿ ಇಬ್ಬರೂ ಎಸ್ಬಿಐ ಉದ್ಯೋಗಿಗಳಾಗಿದ್ದರು. ತಂದೆ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ತಾಯಿ ನಿವೃತ್ತರಾಗಿದ್ದಾರೆ. ಅದಾದ ಬಳಿಕ ಕಮಲ್ ಬಾಬು ತನ್ನ ತಂದೆ ಇದ್ದ ಪೋಸ್ಟ್ಗೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಕೆಲಸ ಸಿಕ್ಕಿರಲಿಲ್ಲ. ತುಂಬ ವಿಳಂಬ ಆಗುತ್ತಿತ್ತು. ಹಾಗಾಗಿ ಎಸ್ಬಿಐ ಹೆಸರಿನಲ್ಲಿ ತಾನೇ ಸ್ವತಃ ಬ್ಯಾಂಕ್ ತೆರೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:ಇನ್ನು ಮುಂದೆ ಶನಿವಾರ, ಭಾನುವಾರ ಎರಡೂ ದಿನ ಲಾಕ್ಡೌನ್: ಗೋವಿಂದ ಕಾರಜೋಳ
ಆದರೆ ಇದುವರೆಗೆ ಯಾವ ಗ್ರಾಹಕರೂ ತಮಗೆ ಹಣ ಮೋಸವಾಗಿದೆ ಎಂದು ದೂರು ನೀಡಿಲ್ಲ. ಅಲ್ಲದೆ, ನನಗೆ ಜನರಿಗೆ ಹಣ ವಂಚನೆ ಮಾಡಬೇಕು ಎಂಬ ಉದ್ದೇಶ ಇರಲಿಲ್ಲ. ನನಗಾಗಿಯೇ ಒಂದು ಬ್ಯಾಂಕ್ ಬೇಕಿತ್ತು. ಹಾಗಾಗಿ ತೆರೆದೆ ಎಂದು ಕಮಲ್ ಬಾಬು ಕೂಡ ಹೇಳಿದ್ದಾನೆ. ಈ ಮೂರು ತಿಂಗಳ ಅವಧಿಯಲ್ಲಿ ಅವನ ತಾಯಿ ಮತ್ತು ಆಂಟಿಯ ಅಕೌಂಟ್ನಿಂದ ಹೆಚ್ಚಿನ ವ್ಯವಹಾರವಾಗಿದ್ದು ಪತ್ತೆಯಾಗಿದೆ. (ಏಜೆನ್ಸೀಸ್)