ರಾಮನಗರ: ಚನ್ನಪಟ್ಟಣ ತಾಲೂಕಿನ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಪರಂಗಿ ಹಣ್ಣು (ಪಪ್ಪಾಯ) ಮಾರುಕಟ್ಟೆ ಇಲ್ಲದೆ ತೋಟದಲ್ಲಿ ಕೊಳೆಯುತ್ತಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಪಪ್ಪಾಯ ಸಾಗಿಸಲು ವ್ಯವಸ್ಥೆ ಇಲ್ಲ ಹಾಗೂ ಹಣ್ಣು ಖರೀದಿಸಲು ವರ್ತಕರು ಮುಂದೆ ಬರುತ್ತಿಲ್ಲ. ಹೀಗಾಗಿ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಚನ್ನಪಟ್ಟಣ ತಾಲೂಕಿನ ಮಳೂರುಪಟ್ಟಣ, ಸುಳ್ಳೇರಿ, ಗರಕಹಳ್ಳಿ, ಕೃಷ್ಣಾಪುರ, ಇಗ್ಗಲೂರು ಸೇರಿದಂತೆ ಹಲವು ಗ್ರಾಮಗಳ ನೂರಾರು ಎಕರೆ ಪ್ರದೇಶದಲ್ಲಿ ರೈತರು ಪಪ್ಪಾಯ ಬೆಳೆದಿದ್ದಾರೆ.
ರಂಜಾನ್ ವೇಳೆ ಬೇಡಿಕೆ: ರಂಜಾನ್ ವೇಳೆ ಪಪ್ಪಾಯ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ. ಹೀಗಾಗಿ ಇದನ್ನೇ ನಂಬಿಕೊಂಡು ರೈತರು ಬೆಳೆ ಬೆಳೆದಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಮುಸ್ಲಿಮರು ಮನೆಯಲ್ಲೇ ಸರಳವಾಗಿ ರಂಜಾನ್ ಆಚರಿಸುತ್ತಿದ್ದಾರೆ. ಇದರಿಂದ ಹಣ್ಣಿಗೆ ಬೇಡಿಕೆ ಕುಸಿದಿದೆ. ಅಲ್ಲದೆ ರಾಜ್ಯದಲ್ಲಿ ಬೆಳೆದ ಪರಂಗಿ ಹಣ್ಣನ್ನು ಮುಂಬೈ ಸೇರಿದಂತೆ ವಿವಿಧ ನಗರಗಳಿಗೆ ಪೂರೈಸಲಾಗುತ್ತಿತ್ತು. ಕರೊನಾ ವೈರಸ್ ದಾಳಿ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಹಣ್ಣು ಪೂರೈಕೆಯಾಗುತ್ತಿಲ್ಲ. ಇದರಿಂದ ಬೆಳೆಗಾರರಿಗೆ ಸಮಸ್ಯೆ ಎದುರಾಗಿದೆ.
ಹೀಗಾಗಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಸರ್ಕಾರ ಬೆಲೆ ನಿಗದಿ ಮಾಡಿ ಹಣ್ಣು ಖರೀದಿಸಿ ಮಾರುಕಟ್ಟೆಗೆ ಪೂರೈಕೆ ಮಾಡಬೇಕು ಎಂಬುದು ಬೆಳೆಗಾರರ ಆಗ್ರಹ.
ವಿದ್ಯುತ್ ಬಿಲ್ ನೀಡಲು ತೆರಳಿದ ಮನೆ ಮಾಲೀಕರು ನವ ದಂಪತಿಯ ಸ್ಥಿತಿ ಕಂಡು ಕಂಗಾಲಾಗಿದ್ದೇಕೆ?