ತ್ಯಾಮಗೊಂಡ್ಲು: ವಿಎಸ್ಎಸ್ಎನ್ನ ಷೇರುದಾರ ರೈತರ ಮಕ್ಕಳಿಗೆ ಮುಂದಿನ ಸಾಲಿನಿಂದ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಹೊನ್ನರಾಯನಹಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಟಿ.ಎಸ್.ಮೋಹನ್ ಕುಮಾರ್ ತಿಳಿಸಿದರು.
ಹೋಬಳಿಯ ಹೊನ್ನರಾಯನಹಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಎಸ್ಎಸ್ಎನ್ನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ನಿರ್ದೇಶಕರ ಸಭೆಯಲ್ಲಿ ಪ್ರತಿಭಾ ಪುರಸ್ಕಾರದ ಬಗ್ಗೆ ಚರ್ಚಿಸಿ ನಿಯಮ ರೂಪಿಸಲಾಗುವುದು ಎಂದರು.
ಗೊಬ್ಬರ ಮಾರಾಟಕ್ಕೆ ಸರ್ಕಾರ ಹೊಸ ನೀತಿ ರೂಪಿಸಿದ್ದು, ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದವರು ತರಬೇತಿ ಪಡೆದ ನಂತರ ಸರ್ಕಾರದಿಂದ ಪರವಾನಗಿ ಪಡೆದು, ಗೊಬ್ಬರ ಮಾರಾಟ ಮಾಡಬೇಕು. ಮುಂದಿನ ದಿನಗಳಲ್ಲಿ ಸಂಘದಿಂದ ಗೊಬ್ಬರ ಮಾರಾಟಕ್ಕೆ ಪ್ರಯತ್ನ ಮಾಡಲಾಗುವುದು ಎಂದರು.
ಚಿನ್ನದ ಸಾಲಕ್ಕೆ ನೀಡಲು ಪ್ರಯತ್ನ ಮಾಡಲಾಗುತ್ತಿದ್ದು, ಅಗತ್ಯ ಸೌಲಭ್ಯ ಅಳವಡಿಸಿಕೊಂಡು ಅದನ್ನೂ ಪ್ರಾರಂಭ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸಿಇಒ ಕೆಂಪಯ್ಯ ಮಾತನಾಡಿ, 2019-20ನೇ ಸಾಲಿನಲ್ಲಿ ಸಂಘ 2.38 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ನೆಲಮಂಗಲ ಬಿಡಿಸಿಸಿ ಬ್ಯಾಂಕ್ನಲ್ಲಿ 17 ಲಕ್ಷ ಅವಧಿ ಠೇವಣಿ ಇಡಲಾಗಿದೆ ಎಂದು ಮಾಹಿತಿ ನೀಡಿದರು.
ನಿರ್ದೇಶಕರಾದ ಎಚ್.ಕೆ.ಲೋಕೇಶ್, ಎಚ್.ಹನುಮಂತರಾಜು, ಬಿ.ನಟರಾಜ್, ಎಚ್.ಎಸ್.ಬಸವರಾಜು, ಎಂ.ರಂಗಸ್ವಾಮಯ್ಯ, ವೈ.ಬಿ.ಶಿವಕುಮಾರ್, ಎಂ.ನರಸಿಂಹಯ್ಯ, ಟಿ.ರವಿಕುಮಾರ್, ಎಚ್.ಸುವರ್ಣಮ್ಮ, ಬಿ.ಅನ್ನಪೂರ್ಣಮ್ಮ, ಸಿಬ್ಬಂದಿ ವಸಂತ್, ಎಸ್.ಚಂದನ್ ಇತರರು ಇದ್ದರು.
ಸಭೆಯಲ್ಲಿ ವಾಗ್ವಾದ: ಸಭೆಯಲ್ಲಿ ವಕೀಲರೊಬ್ಬರ ಪ್ರವೇಶ ಗೊಂದಲ, ವಾಗ್ವಾದ, ನೂಕಾಟ ತಳ್ಳಾಟಕ್ಕೆ ಕಾರಣವಾಯಿತು.
ರೈತರ ಪ್ರಶ್ನೆಗಳಿಗೆ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸಿಇಒ ಉತ್ತರಿಸುತ್ತಿದ್ದರು. ಈ ವೇಳೆ ಗಂಗಬೈರಪ್ಪನಪಾಳ್ಯದ ವಕೀಲ ಶ್ರೀನಿವಾಸ್, ನೇರವಾಗಿ ರೈತರ ಪ್ರಶ್ನೆಗಳಿಗೆ ಉತ್ತರಿಸಲು ಮುಂದಾಗಿದ್ದರು. ಇದಕ್ಕೆ ನಿರ್ದೇಶಕ ನಟರಾಜ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತ ತಲುಪಿತು. ಬಳಿಕ ಇಬ್ಬರನ್ನು ಗ್ರಾಮಸ್ಥರು ಸಮಾಧಾನಪಡಿಸಿ ಸಭೆ ಮುಂದುವರಿಸಿದರು.