ಮಧುಮೇಹ ನಿಯಂತ್ರಣಕ್ಕೆ ಉಪಯುಕ್ತವಾದ ಆಸನವೆಂದರೆ ಬ್ರಹ್ಮ ಮುದ್ರಾ ಶಶಾಂಕಾಸನ. ಇಂಗ್ಲೀಷಿನಲ್ಲಿ ಈ ಯೋಗಾಸನವನ್ನು ಆ್ಯಂಟಿ-ಡಯಾಬೆಟಿಕ್ ಎಂದು ಕರೆಯಲಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದ ವ್ಯಾಧಿಗಳ ನಿವಾರಣೆಗೂ ಇದು ಸಹಕಾರಿ. ಬ್ರಹ್ಮ ಮುದ್ರೆಯನ್ನು ಹಿಡಿದು ಶಶಾಂಕ ಅಂದರೆ ಮೊಲವನ್ನು ಹೋಲುವ ಭಂಗಿ ಮಾಡುವುದರಿಂದ ಇದಕ್ಕೆ ಈ ಹೆಸರು ಬಂದಿದೆ.
ಪ್ರಯೋಜನಗಳು: ಬ್ರಹ್ಮಮುದ್ರೆಯಲ್ಲಿ ಶಶಾಂಕಾಸನ ಮಾಡುವುದರಿಂದ ಮೇಧೋಜೀರಕ ಗ್ರಂಥಿಗಳು ಪುನಶ್ಚೇತನಗೊಂಡು, ಮಧುಮೇಹ ನಿಯಂತ್ರಣವಾಗುತ್ತದೆ. ಜೀರ್ಣಶಕ್ತಿ ಹೆಚ್ಚುತ್ತದೆ. ಹೊಟ್ಟೆಯ ಗ್ಯಾಸ್, ಗ್ಯಾಸ್ಟ್ರಿಕ್ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಮಹಿಳೆಯರ ಮುಟ್ಟಿನ ದೋಷ ನಿಯಂತ್ರಣ ಮತ್ತು ಹೊಟ್ಟೆಗೆ ಸಂಬಂಧಪಟ್ಟ ವ್ಯಾಧಿ ನಿವಾರಣೆಯಾಗುತ್ತದೆ.
ಇದನ್ನೂ ಓದಿ: ಜೀರ್ಣಶಕ್ತಿ ಹೆಚ್ಚಿಸಿ ಉಸಿರಾಟ ಸುಗಮವಾಗಿಸುತ್ತೆ, ವಜ್ರಾಸನ!
ಅಭ್ಯಾಸ ಕ್ರಮ: ಜಮಖಾನದ ಮೇಲೆ ವಜ್ರಾಸನದಲ್ಲಿ ಕುಳಿತುಕೊಂಡು ಕೈಗಳನ್ನು ಅಡ್ಡ ಮಾಡಿ ವಿಸ್ತರಿಸುವುದು. ಮೊದಲು ಆದಿ ಮುದ್ರೆ ಮಾಡಿ, ನಂತರ ಬ್ರಹ್ಮ ಮುದ್ರೆ ಮಾಡಿ, ಕಿಬ್ಬೊಟ್ಟೆಯ ಕೆಳಗಿನ ಭಾಗಕ್ಕೆ ಒತ್ತಿಕೊಂಡು, ಉಸಿರನ್ನು ತೆಗೆದುಕೊಳ್ಳುತ್ತಾ ಕತ್ತನ್ನು ಹಿಂದಕ್ಕೆ ಬಾಗಿಸುವುದು. ನಂತರ ಉಸಿರನ್ನು ಬಿಡುತ್ತಾ ನಿಧಾನವಾಗಿ ಮುಂದಕ್ಕೆ ಬಾಗಿ ಹಣೆಯನ್ನು ನೆಲಕ್ಕೆ ತಾಗಿಸುವುದು. ಕಣ್ಣು ಮುಚ್ಚಿಕೊಂಡು ಈ ಸ್ಥಿತಿಯಲ್ಲಿ ಸಹಜ ಉಸಿರಾಟ ನಡೆಸುವುದು. ನಂತರ ಉಸಿರನ್ನು ತೆಗೆದುಕೊಳ್ಳುತ್ತಾ ಮೇಲೆ ಬರವುದು.
ಈ ರೀತಿ ಎರಡು-ಮೂರು ಬಾರಿ ಮಾಡಿ, ನಂತರ ಕಾಲು ಚಾಚಿಕೊಂಡು ಕುಳಿತು ವಿಶ್ರಮಿಸಬೇಕು. ಅತಿಯಾದ ಸೊಂಟ ನೋವು ಅಥವಾ ಅಧಿಕ ರಕ್ತದೊತ್ತಡ ಇರುವವರು ಈ ಆಸನವನ್ನು ಮಾಡುವುದು ಬೇಡ.
ಮಹಿಳೆಯರೇ, ಸ್ತನ ಕ್ಯಾನ್ಸರ್ ಬಗ್ಗೆ ಎಚ್ಚರ ವಹಿಸಿ! ರೋಗಲಕ್ಷಣ, ತಪಾಸಣೆ, ಚಿಕಿತ್ಸೆ… ವಿವರಗಳು ಇಲ್ಲಿವೆ