ಹೈದರಾಬಾದ್: ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಖದೀಮರು ಆಭರಣ ಅಂಗಡಿ ಒಂದರಿಂದ 60 ಲಕ್ಷ ರೂಪಾಯಿ ಮೌಲ್ಯದ 17 ಚಿನ್ನದ ಬಿಸ್ಕೆಟ್ಗಳನ್ನು ಕದ್ದಿರುವ ಘಟನೆ ತೆಲಂಗಾಣದ ಹೈದರಾಬಾದಿನಲ್ಲಿ ನಡೆದಿದೆ.
ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿರುವ ಪೊಲೀಸರು ಖದೀಮರಿಂದ 7 ಚಿನ್ನದ ಬಿಸ್ಕೆಟ್ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ಖದೀಮರ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯೂ ಮೇ 27 ರಂದು ನಡೆದಿದ್ದು ಪ್ರಕರಣ ಸಂಬಂಧ ಪೊಲೀಸರು ರೆಹಮಾನ್ ಗಫೂರ್ ಅಥರ್, ಜಾಕಿರ್ ಗನಿ ಅಥರ್, ಪ್ರವೀಣ್ ಯಾದವ್ ಮತ್ತು ಆಕಾಶ್ ಅರುಣ್ ಹೊವಿಲ್ ಎಂಬುವವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ಧಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಯಾವುದೇ ಚರ್ಚೆಯಾಗಿಲ್ಲ: ಜಗದೀಶ್ ಶೆಟ್ಟರ್
ಅಧಿಕಾರಿಗಳ ಸೋಗಿನಲ್ಲಿ ಕಳ್ಳತನ
ಈ ಕುರಿತು ಪ್ರತಿಕ್ರಿಯಿಸಿರುವ ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಸಿ.ವಿ. ಆನಂದ್ ಮೇ 27ರಂದು ಮೋಂಡಾ ಮಾರುಕಟ್ಟೆಯಲ್ಲಿರುವ ಸಿದ್ದಿ ವಿನಾಯಕ ಜ್ಯೂವೆಲರ್ಸ ಆಭರಣ ಅಂಗಡಿಗೆ 8 ರಿಂದ 10 ಮಂದಿ ಆರೋಪಿಗಳು ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ದಾಳಿ ಮಾಡಿದ್ಧಾರೆ.
ಆರೋಪಿಗಳು 60 ಲಕ್ಷ ರೂಪಾಯಿ ಮೌಲ್ಯದ 17 ಚಿನ್ನದ ಬಿಸ್ಕೆಟ್ಗಳನ್ನು ದೋಚಿ ಪರಾರಿಯಾಗಿದ್ದಾರೆ. ಬಳಿಕ ಮಾಲೀಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಅಂಗಡಿ ಸುತ್ತಮುತ್ತ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ನಾಲ್ವರನ್ನು ಬಂಧಿಸಲಾಗಿದ್ದು 7 ಚಿನ್ನದ ಬಿಸ್ಕೆಟ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣದ ಇತರೆ ಆರೋಪಿಗಳು ತಲೆ ಮಾರಿಸಿಕೊಂಡಿದ್ದು ಅವರ ಬಂಧನಕ್ಕಾಗಿ ಬಲೆ ಬೀಸಲಾಗಿದ್ದು ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಇನ್ನುಳಿದವರನ್ನು ಬಂಧಿಸಲಾಗುವುದು ಎಂದು ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಸಿ.ವಿ. ಆನಂದ್ ತಿಳಿಸಿದ್ದಾರೆ.