ನವದೆಹಲಿ: ವನ್ಯಪ್ರಾಣಿಗಳನ್ನು, ಭೂಮಿಯನ್ನು ರಕ್ಷಿಸಬೇಕೆಂದರೆ ಸಸ್ಯಾಹಾರಿಗಳಾಗಿ ಎಂದು ನಾಲ್ಕು ವರ್ಷದಿಂದ ಮಾಂಸ ತಿನ್ನುವುದನ್ನು ನಿಲ್ಲಿಸಿರುವ ನೈಸರ್ಗಿಕವಾದಿ ಸರ್ ಡೇವಿಡ್ ಅಟೆನ್ಬರೊ ಕರೆ ನೀಡಿದ್ದಾರೆ. ಮಳೆಕಾಡುಗಳ ದುಸ್ಥಿತಿಯ ಬಗ್ಗೆ ಉಲ್ಲೇಖಿಸುತ್ತಾ ಜಗತ್ತಿನ ಆರನೇ ಸಾಮೂಹಿಕ ಅಳಿವಿನತ್ತ ನಾವು ಹೆಜ್ಜೆ ಹಾಕಿದ್ದೇವೆ ಎಂದು ಅವರು ಎಚ್ಚರಿಸಿದ್ದಾರೆ.
ನೆಟ್ಫ್ಲಿಕ್ಸ್ನ ‘ಡೇವಿಡ್ ಅಟೆನ್ಬರೊ: ಎ ಲೈಫ್ ಆನ್ ಅವರ್ ಪ್ಲಾನೆಟ್’ ಎಂಬ ಹೊಸ ಡಾಕ್ಯುಮೆಂಟರಿಯಲ್ಲಿ “ನಾವು ನಮ್ಮ ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳಬೇಕು. ಏಕೆಂದರೆ ಬಿಲಿಯನ್ಗಟ್ಟಲೆ ಮಾಂಸಾಹಾರಿಗಳನ್ನು ಭೂಮಿಗೆ ಸಾಕಲು ಸಾಧ್ಯವಾಗುತ್ತಿಲ್ಲ” ಎಂದಿದ್ದಾರೆ ಅಟೆನ್ಬರೊ. ಮಳೆಕಾಡುಗಳು ಒಣಗಿದ ಬಯಲುಗಳಾಗಿ ಬದಲಾಗುವ ಬಗ್ಗೆ ವಿಜ್ಞಾನಿಗಳು ನೀಡಿರುವ ಎಚ್ಚರಿಕೆ ಬಗ್ಗೆ ತಿಳಿಸುತ್ತಾ, “ನಮ್ಮ ಈಡೆನ್ ಗಾರ್ಡನ್ ಕಳೆದುಹೋಗಲಿದೆ… ನಮ್ಮ ಕಾಲದ ದೊಡ್ಡ ದುರಂತವೆಂದರೆ ಜೀವವೈವಿಧ್ಯತೆಯ ನಾಶ…ಇದರಿಂದ ಭೂಮಿಯ ಜಲಚಕ್ರ ಹಾಳಾಗಿ ಹವಾಮಾನ ಬದಲಾವಣೆಯಾಗಿದೆ ” ಎಂದು ಎಚ್ಚರಿಸಿದ್ದಾರೆ.
ಮಾಂಸ ತಿನ್ನುವುದನ್ನು ಕಡಿಮೆ ಮಾಡುವುದರಿಂದ ಜೀವಸಂಕುಲಗಳ ರಕ್ಷಣೆ ಸಾಧ್ಯವಾಗುವುದರೊಂದಿಗೆ ಹೆಚ್ಚು ಆಹಾರ ಕೂಡ ಬೆಳೆಯಬಹುದು. ಜಗತ್ತಿನಾದ್ಯಂತ ನಡೆಯುತ್ತಿರುವ ಪಶುಸಂಗೋಪನೆಯ ಹೆಚ್ಚಿದ ಬೇಡಿಕೆ ಮತ್ತು ಮಾಂಸ – ಹಾಲು ಉತ್ಪನ್ನಗಳ ಬೇಡಿಕೆಯು ಕಾಡುಗಳ ನಾಶಕ್ಕೆ ಪ್ರಮುಖ ಕಾರಣವಾಗಿದೆ ಎಂದು ವಿವರಿಸುವ ಅಟೆನ್ಬರೊ “ಭೂಮಿಯ ಮೇಲಿನ ಅರ್ಧದಷ್ಟು ಫಲವತ್ತಾದ ನೆಲ ಈಗ ಕೃಷಿಭೂಮಿಯಾಗಿದೆ, ಶೇ.70ರಷ್ಟು ಹಕ್ಕಿಗಳು ಸಾಕುಪಕ್ಷಿಗಳಾಗಿದ್ದು, ಅವುಗಳಲ್ಲಿ ಹೆಚ್ಚಿನವು ಕೋಳಿಗಳು. ಭೂಮಿಯ ಮೇಲಿನ ಮೂರನೇ ಒಂದು ಭಾಗದಷ್ಟು ಪ್ರಾಣಿಗಳು ಮನುಷ್ಯರೇ ಇದ್ದೇವೆ. ಇದು ಮನುಷ್ಯರಿಂದ ಮನುಷ್ಯರಿಗಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಹವಾಗಿಬಿಟ್ಟಿದೆ. ಇನ್ನು ಹೆಚ್ಚು ಉಳಿದಿಲ್ಲ…” ಎಂದು ಅಟೆನ್ಬರೊ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಕೃತಿಸಂಬಂಧಿ ಡಾಕ್ಯುಮೆಂಟರಿಗಳ ನಿರ್ಮಾಪಕರಾಗಿ ಜನಪ್ರಿಯರಾಗಿರುವ ಅಟೆನ್ಬರೊ ಅವರ ಜೀವನದ ಮಾಹಿತಿಯೊಂದಿಗೆ, ಭೂಮಿಯ ಅಪಾಯಕಾರಿ ಬದಲಾವಣೆಗಳ ಬಗ್ಗೆ ರೋಚಕ ದೃಶ್ಯಾವಳಿಗಳನ್ನು ಈ ಡಾಕ್ಯುಮೆಂಟರಿ ಹೊಂದಿದೆ. ಭೂಮಿಯಲ್ಲಿ ಆಗುತ್ತಿರುವ ವ್ಯತಿರಿಕ್ತ ಬದಲಾವಣೆಗಳನ್ನು ತಡೆದು ‘ನಿಸರ್ಗದ ವಿರುದ್ಧ ಕೆಲಸ ಮಾಡುವ ಬದಲು ಅದರೊಂದಿಗೆ ಕೆಲಸ ಮಾಡುವುದು’ ಹೇಗೆ ಎಂಬ ಬಗ್ಗೆ ಅಟೆನ್ಬರೊ ಬೆಳಕು ಚೆಲ್ಲಿದ್ದಾರೆ.