ಹೊಸಪೇಟೆ: ರಂಗಭೂಮಿ ಹಿರಿಯ ಕಲಾವಿದೆ, ನಾಡೋಜ ಸುಭದ್ರಮ್ಮ ಮನ್ಸೂರು ಅವರ ನಿಧನ ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಕನ್ನಡ ವಿವಿ ಕುಲಪತಿ ಡಾ.ಸ.ಚಿ.ರಮೇಶ ಹೇಳಿದರು.
ಕನ್ನಡ ವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. 2004ರಲ್ಲಿ ಕನ್ನಡ ವಿವಿ ನಾಡೋಜ ಪದವಿ ನೀಡಿ ಗೌರವಿಸಿದೆ. ಸುಭದ್ರಮ್ಮ ಮನ್ಸೂರು ಬರೆದಿರುವ ವೃತ್ತಿ ರಂಗಭೂಮಿ ಪುಸ್ತಕವನ್ನು ಪ್ರಸಾರಾಂಗದಿಂದ ಪ್ರಕಟಿಸಲಾಗಿದೆ. ಗ್ರಾಮೀಣ ವೃತ್ತಿರಂಗಭೂಮಿ ಕಲಾವಿದರ ಪ್ರೋತ್ಸಾಹಿಸಿ ಬೆಳೆಸಿದರು. ಅವರ ಅಗಲಿಕೆ ನೋವಿನ ಸಂಗತಿ. ನಾಡೋಜ ನೀಡಿರುವುದು ಕನ್ನಡ ವಿವಿಯೇ ಗೌರವಿಸಿಕೊಂಡಂತೆ ಎಂದು ಅಭಿಪ್ರಾಯಪಟ್ಟರು.
ಲಲಿತಕಲೆಗಳ ನಿಕಾಯದ ಡೀನ್ ಡಾ.ಕೆ.ರವೀಂದ್ರನಾಥ ಮಾತನಾಡಿ, ಬಳ್ಳಾರಿ ಹವ್ಯಾಸಿ ಹಾಗೂ ವೃತಿ ರಂಗಭೂಮಿ ಶ್ರೀಮಂತಗೊಳಿಸಿದ ಮಹನೀಯರಲ್ಲಿ ಡಾ.ಸುಭದ್ರಮ್ಮ ಮನ್ಸೂರು ಒಬ್ಬರಾಗಿದ್ದಾರೆ. ಸುಭದ್ರಮ್ಮಗೆ ಅಭಿನಯ ಮತ್ತು ಹಾಡುಗಾರಿಕೆ ಮನೆತನದಿಂದಲೇ ಬಂದ ಬಳುವಳಿ. ಬಳ್ಳಾರಿಯಲ್ಲಿ ಕನ್ನಡ ರಂಗಭೂಮಿ ಬೆಳವಣಿಗೆಗೆ ನೀಡಿದ ಕೊಡುಗೆ ಅಪಾರ. ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ (ಮಲ್ಲಮ್ಮನ ಪಾತ್ರ), ರಕ್ತರಾತ್ರಿ (ದ್ರೌಪದಿ ಪಾತ್ರ) ಸೇರಿ ಅನೇಕ ಸಾಮಾಜಿಕ ನಾಟಕಗಳಲ್ಲಿ ಪಾತ್ರ ಮಾಡಿ ಸೈ ಎನಿಸಿಕೊಂಡವರು. ಉತ್ತರ ಕರ್ನಾಟಕದ ನಾಟಕಕಾರರಾದ ಕಂದಗಲ್ಲ ಹನುಮಂತರಾಯ-ನಲವಡಿ ಶ್ರೀಕಂಠಶಾಸ್ತ್ರಿಗಳ ಗದ್ಯ, ಪದ್ಯಪ್ರಧಾನ ನಾಟಕಗಳನ್ನು ತಮ್ಮ ಅಭಿನಯದ ಮೂಲಕ ಇಡೀ ಕರ್ನಾಟಕಕ್ಕೆ ಪರಿಚಯಿಸಿದ ಕೀರ್ತಿ ಸುಭದ್ರಮ್ಮ ಮನ್ಸೂರು ಅವರಿಗೆ ಸಲ್ಲುತ್ತದೆ. ಅಲ್ಲದೆ ಹಳ್ಳಿಗರ ಹವ್ಯಾಸಿ ರಂಗಭೂಮಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದರು. ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಮಾತನಾಡಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿ ಇದ್ದರು.