ಕುಮಟಾ: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಮಂಜೂರಾಗಿದ್ದ ತಾಲೂಕಿನ ಕುಮಟಾ- ಮೂರೂರು ರಸ್ತೆಯ ಕಾಮಗಾರಿ ಆರಂಭದಿಂದಲೇ ಮುಗ್ಗರಿಸುತ್ತಾ ನಡೆದಿದೆ.
ಅಂದಾಜು 7.85 ಕೋಟಿ ವೆಚ್ಚದಲ್ಲಿ ವರ್ಷದ ಹಿಂದೆಯೇ ಶಾಸಕ ದಿನಕರ ಶೆಟ್ಟಿ ಅವರಿಂದ ಭೂಮಿ ಪೂಜೆಯಾಗಿದ್ದ ಕಾಮಗಾರಿಗೆ ಗ್ರಹಣ ಹಿಡಿದಿದೆ. ರಸ್ತೆ ವಿಸ್ತರಣೆಗಾಗಿ ಮೂರೂರು ರಸ್ತೆಯಲ್ಲಿ ಆರಂಭದಲ್ಲೇ ಸಿದ್ದನಬಾವಿ ಘಟ್ಟದ ಮೇಲ್ಗಡೆಯಿಂದ ಕಾಗಲಮಾನೀರವರೆಗೂ ರಸ್ತೆಯ ಎರಡೂ ಕಡೆ ಒಂದಡಿ ಆಳಕ್ಕೆ ಅಗೆದು ಅಷ್ಟಕ್ಕೇ ಬಿಡಲಾಗಿತ್ತು. ದ್ವಿಚಕ್ರ ವಾಹನಿಗರು ಜಾರಿ ಬಿದ್ದರು. ದೊಡ್ಡ ವಾಹನಗಳ ಚಕ್ರವೂ ಸಿಲುಕಿ ಕೊಂಡು ಸಮಸ್ಯೆ ಎದುರಿಸಿದರು. ಸಾರ್ವಜನಿಕರು ಅಧಿಕಾರಿಗಳ ಬಳಿ ದೂರಿದ್ದರು.
ರಸ್ತೆ ಕಾಮಗಾರಿಯ ಅಸಮರ್ಪಕತೆ ಹಾಗೂ ಅವೈಜ್ಞಾನಿಕತೆಯಿಂದ ಹತ್ತಾರು ಘಟನೆಗಳಲ್ಲಿ ಜನ ನೋವುತಿಂದ ಬಳಿಕ ಅಗೆದ ರಸ್ತೆಯಂಚಿಗೆ ಜಲ್ಲಿ ತುಂಬಿದರು. ಪುನಃ ಕೆಲಸ ಅಷ್ಟಕ್ಕೇ ನಿಲ್ಲಿಸಲಾಯಿತು. ಇದರಿಂದ ಸಾರ್ವಜನಿಕರು ಇನ್ನಷ್ಟು ಸಮಸ್ಯೆ ಎದುರಿಸುವಂತಾಯಿತು. ರಸ್ತೆಯ ಮೇಲೆಲ್ಲ ಜಲ್ಲಿ ಹರಡಿದೆ.
ಈಗ ಲಾಕ್ಡೌನ್ ಮತ್ತು ಮಳೆಗಾಲ ಮುಗಿದು ಬೇಸಿಗೆ ಶುರುವಾಗಿದೆ. ಈ ವೇಳೆಗಾಗಲೇ ಕಾಮಗಾರಿ ಮುಕ್ಕಾಲುಭಾಗ ಮುಗಿದಿರಬೇಕಿತ್ತು. ಶೇ. 5 ರಷ್ಟು ಕೆಲಸವೂ ಆಗಗಿಲ್ಲ. ಕಾಮಗಾರಿ ವೇಳೆ ಆಗಮಿಸಿದ್ದ ರೋಲರ್, ಬುಲ್ಡೋಜರ್, ಇನ್ನಿತರ ವಾಹನಗಳು ನಿಂತಿದ್ದು ತುಕ್ಕು ಹಿಡಿಯುತ್ತಿವೆ. ಪದೇ ಪದೆ ಅಲ್ಪಸ್ವಲ್ಪ ಕೆಲಸ ಮಾಡಿ ನಿಲ್ಲಿಸಲಾಗುತ್ತಿದೆ. ಕಾಮಗಾರಿ ನಿಲ್ಲಿಸಿದ್ದಕ್ಕೆ ಗುತ್ತಿಗೆದಾರನಿಗೆ ಅಧಿಕಾರಿಗಳು ನೊಟೀಸ್ ನೀಡಿದರೂ ಪ್ರಯೋಜನವಾಗಲಿಲ್ಲ. ಕಾಮಗಾರಿ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಂಭೀರ ಪ್ರಯತ್ನ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಮ್ಮೂರಿನ 7 ಕಿಮೀ ನಷ್ಟು ರಸ್ತೆ ಉತ್ತಮವಾಗಿ ಆಗುತ್ತದೆ ಎಂದು ಖುಷಿಯಿಂದ ಇದ್ದೆವು. ಆದರೆ, ರಸ್ತೆ ಬದಿಗೆ ಅಗೆದು ಜಲ್ಲಿ ಸುರಿದಿದ್ದರಿಂದ ವಾಹನ ಚಲಾಯಿಸುವಾಗ ಭಯವಾಗುತ್ತದೆ. ವರ್ಷದಿಂದ ಕಾಯುತ್ತಿದ್ದೇವೆ. ಕೂಡಲೆ ಕಾಮಗಾರಿ ಆರಂಭವಾಗಬೇಕು, ಇಲ್ಲದಿದ್ದರೆ ಪ್ರತಿಭಟನೆ ಮಾಡುವ ಸಂದರ್ಭ ಎದುರಾಗಲಿದೆ.
| ಶ್ರೀಪಾದ ಹೆಗಡೆ ಕಲ್ಲಬ್ಬೆ
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಮಂಜೂರಾಗಿದ್ದ ಮೂರೂರು ರಸ್ತೆ ಕಾಮಗಾರಿ ನಿಲ್ಲಿಸಿರುವ ಬಗ್ಗೆ ಗುತ್ತಿಗೆದಾರನಿಗೆ ಹಲವು ನೊಟೀಸ್ ನೀಡಲಾಗಿದೆ. ಈ ಬಗ್ಗೆ ಮೇಲಧಿಕಾರಿಗಳಿಗೂ ಸೂಕ್ತ ಕ್ರಮ್ಕಕೆ ವರದಿ ಸಲ್ಲಿಸಲಾಗಿದೆ. ಯೋಜನೆಯ ಮುಖ್ಯ ಇಂಜಿನಿಯರ್ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.
| ಶಶಿಕಾಂತ ಕೊಳೆಕರ್
ಪಿಡಬ್ಲು್ಯಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಕುಮಟಾ