More

    ಮಾದಪ್ಪನಿಗೆ ಸಾಂಪ್ರದಾಯಿಕ ಮೊದಲನೇ ಮಹಾರುದ್ರಾಭಿಷೇಕ

    ಹನೂರು: ಮಹಾ ಶಿವರಾತ್ರಿ ಜಾತ್ರೆ ಮುಕ್ತಾಯ ಹಿನ್ನೆಲೆಯಲ್ಲಿ ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಶ್ರೀ ಸಾಲೂರು ಬೃಹನ್ಮಠ ವತಿಯಿಂದ ಮೊದಲನೇ ಮಹಾರುದ್ರಾಭಿಷೇಕವನ್ನು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.

    ಬೃಹನ್ಮಠದ ಪೀಠಾಧಿಪತಿಗಳ ಸಾನ್ನಿಧ್ಯದಲ್ಲಿ ಮಾದಪ್ಪನ ಸನ್ನಿಧಿಯಲ್ಲಿ ಸ್ವಾಮಿಗೆ 101 ಪೂಜೆ ನೆರವೇರಿಸುವುದು ಸಂಪ್ರದಾಯ. ಈ ಪೂಜೆಯನ್ನು ಧಾರ್ಮಿಕವಾಗಿ ಮಹಾ ರುದ್ರಾಭಿಷೇಕವಾಗಿ ಪರಿವರ್ತಿಸಲಾಯಿತು. ಅದರಂತೆಯೇ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆವರೆಗೆ ಮಾದಪ್ಪನಿಗೆ ಮಹಾ ರುದ್ರಾಭಿಷೇಕ ನೆರವೇರಿಸಲಾಯಿತು.

    ಈ ವೇಳೆ ಮಾದಪ್ಪನಿಗೆ 101 ಮಜ್ಜನ ಸೇವೆ, ಭಸ್ಮಧಾರಣೆ, ಬಿಲ್ವಾರ್ಚನೆ ಹಾಗೂ ಎಳನೀರು, ಜೇನುತುಪ್ಪ, ಹಾಲು, ಮೊಸರು ಹಾಗೂ ಇತರ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. ವಿಶೇಷವಾಗಿ ಸ್ವಾಮಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ ನೈವೇದ್ಯ ಅರ್ಪಿಸಲಾಯಿತು. ಬಳಿಕ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ದೀಪ, ಧೂಪಧಾರತಿಯಿಂದ ಮಹಾ ಮಂಗಳಾರತಿ ಮಾಡುವ ಮೂಲಕ ಮಹಾ ರುದ್ರಾಭಿಷೇಕವನ್ನು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.

    ಉತ್ಸವ ಮೂರ್ತಿಗಳ ಪ್ರದಕ್ಷಿಣೆ: ಮಹಾ ರುದ್ರಾಭಿಷೇಕ ಮುಗಿದ ಬಳಿಕ ಶ್ರೀಗಳ ಸಾನಿಧ್ಯದಲ್ಲಿ ಹುಲಿ, ಬಸವ ಹಾಗೂ ರುದ್ರಾಕ್ಷಿ ಉತ್ಸವ ವಾಹನಗಳನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಈ ವೇಳೆ ಆಗಮಿಸಿದ್ದ ಹರಗುರು ಶರಣರು, ಭಕ್ತರು ದಂಡಿನ ಕೋಲನ್ನು ಹೊತ್ತು ಸಾಗಿದರು. ಮಹಾ ರುದ್ರಾಭಿಷೇಕದ ಹಿನ್ನೆಲೆ ದೇಗುಲವನ್ನು ವಿವಿಧ ಪುಷ್ಪ ಹಾಗೂ ತಳಿರು-ತೋರಣದಿಂದ ಸಿಂಗಾರ ಮಾಡಲಾಗಿತ್ತು.

    ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ, ಮೈಸೂರಿನ ನೀಲಕಂಠ ಮಠದ ಶ್ರೀ ನೀಲಸಿದ್ಧಸ್ವಾಮೀಜಿ, ಗುಂಡೇಗಾಲ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts