ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ನಾಳೆ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದು ಗ್ಯಾರಂಟಿಯಾಗಿದೆ.
ಪವನ್ ಗುಪ್ತಾ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಇರುವ ಕೊನೆಯ ಮಾರ್ಗವೆನ್ನುವಂತೆ ಸುಪ್ರೀಂ ಕೋರ್ಟ್ಗೆ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿದ್ದ. ಪ್ರಕರಣ ನಡೆದಾಗ ತನಗೆ 18 ವರ್ಷ ತುಂಬಿರಲಿಲ್ಲ, ಆಗ ನಾನಿನ್ನೂ ಬಾಲಕನಾಗಿದ್ದೆ ಎಂದು ಆತ ಅರ್ಜಿಯಲ್ಲಿ ಹೇಳಿದ್ದ. ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂದು ಆತ ಅರ್ಜಿಯಲ್ಲಿ ಕೇಳಿಕೊಂಡಿದ್ದ. ಆದರೆ ಇದೀಗ ಆತನ ಅರ್ಜಿಯನ್ನು ಸುಪ್ರೀಂ ಕೋರ್ಟ್ ತೆಗೆದುಹಾಕಿದೆ.
ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನೊಳಗೊಂಡ ಆರು ನ್ಯಾಯಮೂರ್ತಿಗಳ ಪೀಠವು ಇಂದು ವಿಚಾರಣೆ ನಡೆಸಿ ಅರ್ಜಿಯನ್ನು ವಜಾಗೊಳಿಸಿದೆ. “ಮೌಖಿಕ ವಿಚಾರಣೆಯ ಅರ್ಜಿಯನ್ನು ತಿರಸ್ಕರಿಸಲಾಗಿದೆ. ನಾವು ಕ್ಯುರೇಟಿವ್ ಅರ್ಜಿ ಮತ್ತು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ಅದನ್ನು ವಜಾ ಗೊಳಿಸಿದ್ದೇವೆ” ಎಂದು ನ್ಯಾಯಾಲಯವು ತಿಳಿಸಿದೆ.
ನಾಲ್ವರು ಅಪರಾಧಿಗಳ ಗಲ್ಲು ಶಿಕ್ಷೆ ನಾಳೆ ಬೆಳಗ್ಗೆ 5.30ಕ್ಕೆ ನಿಗದಿಯಾಗಿದ್ದು, ಏಳು ವರ್ಷದ ಹಿಂದಿನ ಪ್ರಕರಣಕ್ಕೆ ನಾಳೆ ಅಂತಿಮ ಶಿಕ್ಷೆ ಸಿಗಲಿದೆ. (ಏಜೆನ್ಸೀಸ್)