ಮುಂಬೈ: ದೇಶದಲ್ಲಿ ಕರೊನಾ ಭೀತಿ ಹೆಚ್ಚಾಗಿದ್ದು, ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಕರೊನಾ ಪೀಡಿತ ದೇಶಗಳಿಗೆ ಪ್ರವಾಸ ಕೈಗೊಂಡು ಬಂದಿರುವ ಉದ್ಯೋಗಿಗಳಿಗೆ 14 ದಿನಗಳ ಕಾಲ ರಜೆ ನೀಡುವಂತೆ ಮಹಾರಾಷ್ಟ್ರ ರಾಜ್ಯ ಆರೋಗ್ಯ ಇಲಾಖೆ ಖಾಸಗಿ ಸಂಸ್ಥೆಗಳಿಗೆ ಸಲಹೆ ನೀಡಿದೆ.
ಕರೊನಾ ಪೀಡಿತವಾಗಿರುವ 71 ದೇಶಗಳಿಗೆ ಪ್ರವಾಸ ಕೈಗೊಂಡು ಬಂದಿರುವ ಉದ್ಯೋಗಿಗಳು ರಜೆ ತೆಗೆದುಕೊಳ್ಳಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತ್ತು. ಆದರೆ ಕಚೇರಿಗೆ ತೆರಳದಿದ್ದರೆ ಸಂಬಳ ಕಡಿತವಾಗುತ್ತದೆ ಎಂಬ ಭಯವಿರುವ ಉದ್ಯೋಗಿಗಳು ರಜೆ ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ ಖಾಸಗಿ ಸಂಸ್ಥೆಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದ್ದು, ಅಂತಹ ಉದ್ಯೋಗಿಗಳಿಗೆ 14 ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿರಲು ರಜೆಯನ್ನು ನೀಡಬೇಕು ಎಂದು ಮಹಾರಾಷ್ಟ್ರದ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ವಿದೇಶಿ ಪ್ರವಾಸ ಕೈಗೊಂಡಿರುವ ಉದ್ಯೋಗಿಗಳು ಯಾವುದೇ ಕಾರಣಕ್ಕೂ ತಮ್ಮ ಪ್ರವಾಸದ ವಿಚಾರವನ್ನು ಬಚ್ಚಿಡುವಂತಿಲ್ಲ. ಹಾಗೊಂದು ವೇಳೆ ಬಚ್ಚಿಟ್ಟರೆ ಅದನ್ನು ಅಪರಾಧವೆಂದೇ ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ.
ಕೇರಳದಲ್ಲಿ ದೇಶದ ಮೊದಲ ಕರೊನಾ ವೈರಸ್ ಪತ್ತೆಯಾಗಿದ್ದು, ಇಂದಿಗೆ ಕರೊನಾ ಸೋಂಕಿತರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ನಾಲ್ಕು ಜನರಲ್ಲಿ ಕರೊನಾ ಇರುವುದು ಧೃಡವಾಗಿದೆ. ಇಂದು ಕಲಬುರಗಿಯಲ್ಲಿ ಕರೊನಾ ಶಂಕಿತನೊಬ್ಬ ಮೃತನಾಗಿದ್ದು, ಹೆಚ್ಚಿನ ವೈದ್ಯಕೀಯ ತಪಾಸಣೆಯನ್ನು ನಡೆಸಲಾಗುತ್ತಿದೆ. (ಏಜೆನ್ಸೀಸ್)