ಹೊಳೆನರಸೀಪುರ: ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಬದುಕಿನ ಸರಳತೆ ಆದರ್ಶ ವ್ಯಕ್ತಿಗಳಾಗಲು ದಾರಿದೀಪವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಹೇಳಿದರು.
ತಾಲೂಕಿನ ದೊಡ್ಡ ಕಾಡನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಗಾಂಧಿ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸತ್ರಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಮಹನೀಯರ ಜೀವನದ ಮೌಲ್ಯಗಳೇ ಭಾರತೀಯರಿಗೆ ಆದರ್ಶಗಳಾಗಿವೆ. ದೇಶಕ್ಕಾಗಿ ಅವರು ನೀಡಿದ ಕೊಡುಗೆಗಳು ಅಪಾರ. ಅವರು ನಡೆದ ಹಾದಿಯಲ್ಲಿ ನಾವು ನಡೆದರೆ ದೇಶದ ಸಮಸ್ಯೆಗಳು ದೂರವಾಗಲಿವೆ. ಈ ಮಹಾತ್ಮರು ಅವರ ಬದುಕಿನ ಮೂಲಕವೇ ಉತ್ತರ ನೀಡಿ ಹೋಗಿದ್ದಾರೆ. ಅವರ ಸತ್ಯ, ಶಾಂತಿ, ಅಹಿಂಸೆ ಹಾಗೂ ಸರಳತೆಯ ತತ್ವ-ಸಿದ್ಧಾಂತಗಳು ಅನುಕರಣೀಯ ಎಂದು ಹೇಳಿದರು.
ಶಾಲೆಯ ಮುಖ್ಯಶಿಕ್ಷಕ ಮಹೇಶಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ತಮ್ಮಯ್ಯ ನಾಯಕ, ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಣ್ಣ, ತಾಲೂಕು ಕಾರ್ಮಿಕರ ಸಂಘದ ಅಧ್ಯಕ್ಷ ರೇವಣ್ಣ ನಾಯಕ, ನಿವೃತ್ತಿ ಶಿಕ್ಷಕ ಏಕಾಂತಪ್ಪ, ಮಾಜಿ ಗ್ರಾಪಂ ಸದಸ್ಯ ತೇಜೇಸ್ವಾಮಿ, ಶಿಕ್ಷಕರಾದ ಅನುರಾಧಾ, ಗ್ರಾಮಸ್ಥರಾದ ಮಾದೇಶ್ಸ್ವಾಮಿ, ನಾಗರಾಜ, ರವಿ ಮಂಜುನಾಥ ಮತ್ತಿತರರು ಭಾಗವಹಿಸಿದ್ದರು.
ಶಾಲೆಯ ಎಲ್ಲ ಮಕ್ಕಳಿಗೆ ದಾನಿಗಳಾದ ಚಂದನ್ ಟ್ರೇಡರ್ಸ್ ಮಾಲೀಕರಾದ ಚೇತನ್ ಮತ್ತು ಮಂಜುನಾಥ ಮೆಡಿಕಲ್ ಮಾಲೀಕರಾದ ಮಂಜೂರ್ ಅವರು ಶಾಲೆಯ 120 ಮಕ್ಕಳಿಗೆ ಸುಮಾರು 40 ಸಾವಿರ ರೂ. ವೆಚ್ಚದ ಸಮವಸ್ತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಅವರ ಮೂಲಕ ಶಾಲೆಯ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದರು.