ಲಾಕ್ಡೌನ್ ಹಿನ್ನೆಲೆಯಲ್ಲಿ ಎಲ್ಲ ಸಿನಿಮಾಗಳ ಚಿತ್ರೀಕರಣ ಸ್ಥಗಿತಗೊಂಡಿದೆ. ಕಾರ್ಮಿಕರಿಗೆ ಕೆಲಸ ಇಲ್ಲದೆ, ಸಂಕಷ್ಟಕ್ಕೀಡಾಗಿದ್ದಾರೆ. ನಿರ್ಮಾಪಕರ ಸ್ಥಿತಿಯಂತೂ ಬಾಯಲ್ಲಿ ಬಿಸಿ ತುಪ್ಪ ಇಟ್ಟುಕೊಂಡಂತಾಗಿದೆ. ಕೋಟ್ಯಂತರ ಮೊತ್ತ ಹೂಡಿಕೆ ಮಾಡಿರುವ ಸಿನಿಮಾಗಳು ಅರ್ಧಕ್ಕೆ ನಿಂತಿವೆ. ಮುಂದೇನೂ ಎಂಬ ಪ್ರಶ್ನೆ ಎದುರಾಗಿದೆ. ಇದೆಲ್ಲ ಒಂದೆಡೆಯಾದರೆ, ಸಿನಿಮಾ ಚಿತ್ರೀಕರಣಕ್ಕೆಂದೇ ಕೋಟಿ ಕೋಟಿ ಹಣ ವ್ಯಯಿಸಿ ಹಾಕಿದ ಸೆಟ್ ಅನ್ನು ಸರ್ವನಾಶ ಮಾಡಿದರೆ ಹೇಗಾಗಬೇಡ! ಹೌದು, ಈ ವರ್ಷದ ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾ ಎಂದೇ ಹೇಳಲಾಗಿದ್ದ ಅಜಯ್ ದೇವಗನ್ ನಾಯಕತ್ವದ ‘ಮೈದಾನ್’ ಸಿನಿಮಾಕ್ಕಾಗಿ ಹಾಕಲಾಗಿದ್ದ ಸೆಟ್ ತೆರವುಗೊಳಿಸಲಾಗಿದೆ! ಇನ್ನು ಕೆಲ ದಿನಗಳಲ್ಲಿ ಮಳೆಗಾಲ ಶುರುವಾಗುವುದರಿಂದ ಚಿತ್ರದ ನಿರ್ಮಾಪಕ ಬೋನಿ ಕಪೂರ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಇಂದು ರವಿಚಂದ್ರನ್ ಅವರ ಹುಟ್ಟುಹಬ್ಬ: ಹೊಸ ಚಾಪ್ಟರ್ ಶುರು
ಅಂದಹಾಗೆ, ‘ಮೈದಾನ್’ ಸಿನಿಮಾ 1951ರಿಂದ 1962ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಆ ಕಾಲಘಟ್ಟದಲ್ಲಿ ಫುಟ್ಬಾಲ್ ಕ್ರೀಡೆ ಭಾರತದಲ್ಲಿ ಉತ್ತುಂಗದಲ್ಲಿತ್ತು. ಅದನ್ನೇ ಕಥೆಯನ್ನಾಗಿಸಿಕೊಂಡು ಸಿನಿಮಾ ಮಾಡಲಾಗುತ್ತಿದೆ. ಆ ಚಿತ್ರಕ್ಕಾಗಿಯೇ ಮುಂಬೈನ ಹೊರವಲಯದಲ್ಲಿ ಬರೋಬ್ಬರಿ 16 ಎಕರೆ ಜಾಗದಲ್ಲಿ ಬೃಹತ್ ಸೆಟ್ ಹಾಕಲಾಗಿತ್ತು. ಶೂಟಿಂಗ್ ಸೇರಿ ಎಲ್ಲ ಕೆಲಸಗಳನ್ನ ಅಲ್ಲಿಯೇ ಮಾಡಿಕೊಳ್ಳುವಷ್ಟು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆದರೆ, ಲಾಕ್ಡೌನ್ ಹಿನ್ನೆಲೆಯಲ್ಲಿ ಶೂಟಿಂಗ್ ಸ್ಥಗಿತಗೊಂಡಿದ್ದರಿಂದ ಮತ್ತು ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ನೆಲಸಮ ಮಾಡಲಾಗಿದೆ.
ಇದನ್ನೂ ಓದಿ: VIDEO| ರವಿಚಂದ್ರನ್ ಜನ್ಮದಿನಕ್ಕೆ ಕಿಚ್ಚನ ಶುಭಾಶಯ ಹೀಗಿದೆ ನೋಡಿ!
ಸತತ ಎರಡು ತಿಂಗಳ ಕಾಲ ನಿರ್ಮಾಣ ಮಾಡಿದ್ದ ಸೆಟ್ನಲ್ಲಿ ಒಂದಷ್ಟು ಭಾಗದ ಶೂಟಿಂಗ್ ಮಾಡಿಕೊಳ್ಳಲಾಗಿತ್ತು. ಇನ್ನುಳಿದಂತೆ ಲಖನೌ ಮತ್ತು ಕೋಲ್ಕತದಲ್ಲಿಯೂ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಲಾಕ್ಡೌನ್ ತೆರವಾಗಿ ಶೂಟಿಂಗ್ಗೆ ಅನುಮತಿ ಸಿಕ್ಕರೂ, ಸೆಟ್ ನಿರ್ಮಾಣಕ್ಕಾಗಿಯೇ ಎರಡು ತಿಂಗಳ ಕಾಲಾವಕಾಶ ಬೇಕು. ಹಾಗಾಗಿ ಸದ್ಯಕ್ಕೆ ಬೇರೆ ಕೆಲಸಗಳಿಗೆ ಚಾಲನೆ ನೀಡಿದೆ ಚಿತ್ರತಂಡ. (ಏಜೆನ್ಸೀಸ್)
ರವಿಚಂದ್ರನ್ ಜನ್ಮದಿನ; ಚಂದನವನದ ಯಾವೆಲ್ಲ ಕಲಾವಿದರು ಹೇಗೆಲ್ಲ ವಿಶ್ ಮಾಡಿದ್ರು…