ಶಿವಮೊಗ್ಗ: ಆರೋಪಗಳಿಗೆ ಉತ್ತರ ನೀಡುವುದಲ್ಲ. ಬದಲಾಗಿ ಹೊಸ ಆಖ್ಯಾನವನ್ನೇ ನಿರ್ಮಾಣ ಮಾಡಬೇಕು. ಕೀಳರಿಮೆ ಇರುವವರು ಕೀಳರಿಮೆ ತೊರೆಯಬೇಕು. ಮೇಲರಿಮೆಯ ಭಾವನೆ ಹೊಂದಿದರೂ ಅದನ್ನು ಬಿಡಬೇಕೆಂಬುದೇ ಆನ್ವೀಕ್ಷಿಕೀ ಕೃತಿಯ ಮೂಲ ಆಶಯ ಎಂದು ಆರ್ಎಸ್ಎಸ್ ವಿಭಾಗ ಸಹಕಾರ್ಯವಾಹ ಎಂ.ಪಿ.ಮಧುಕರ್ ತಿಳಿಸಿದರು.
ಆರ್ಎಸ್ಎಸ್ ಜಿಲ್ಲಾ ಕಾರ್ಯಾಲಯ ಮಧುಕೃಪಾದಲ್ಲಿ ಶನಿವಾರ ರಾಷ್ಟ್ರೋತ್ಥಾನ ಬಳಗ ಏರ್ಪಡಿಸಿದ್ದ ಆನ್ವೀಕ್ಷಿಕೀ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಚಲಿತ ವಿದ್ಯಮಾನಗಳನ್ನು ಗಮನಿಸಿ ಈ ಕೃತಿ ರಚನೆ ಮಾಡಲಾಗಿದೆ. ಸತ್ಯದ ಶೋಧನೆಗಳನ್ನು ಇದರಲ್ಲಿ ಚರ್ಚಿಸಲಾಗಿದೆ ಎಂದರು.
ವೈಚಾರಿಕ ನೆಲಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕರಿಗೆ ಹಲವು ಸಂಗತಿಗಳು ತಿಳಿಯಬೇಕು. ಅದರೊಂದಿಗೆ ಪರ ಹಾಗೂ ವಿರೋಧದ ಚರ್ಚೆಗಳೂ ನಡೆಯಬೇಕೆಂಬುದು ಈ ಕೃತಿಯ ಉದ್ದೇಶ. ಆಖ್ಯಾನ ಮೊದಲೋ, ವಿದ್ಯಮಾನ ಮೊದಲೋ ಎಂಬ ಚರ್ಚೆಯೂ ಇದೆ. ವಾಸ್ತವದ ಆಖ್ಯಾನ ಒಂದು ಭಾಗವಾದರೆ, ಸುಳ್ಳು ಆಖ್ಯಾನಗಳನ್ನೂ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯ, ಸಾಂಸ್ಕೃತಿಕ, ವಾಣಿಜ್ಯ, ಧಾರ್ಮಿಕ ಆಖ್ಯಾನಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಆರು ಅಂಶಗಳನ್ನು ಆಯ್ಕೆ ಮಾಡಿಕೊಂಡು ಕೃತಿ ರಚಿಸಲಾಗಿದೆ. ರಾಜಪ್ರಭುತ್ವ ಉತ್ತಮವಾಗಿತ್ತೇ? ಪ್ರಜಾಪ್ರಭುತ್ವ ಚೆನ್ನಾಗಿದೆಯೇ? ಎಂಬ ಬಗ್ಗೆಯೂ ಚರ್ಚಿಸಲಾಗಿದೆ ಎಂದರು.
ಆರ್ಎಸ್ಎಸ್ ಜಿಲ್ಲಾ ಸಂಘ ಚಾಲಕ ಬಿ.ಎ.ರಂಗನಾಥ ಕೃತಿ ಬಿಡುಗಡೆ ಮಾಡಿದರು. ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಡಾ. ಪಿ.ಸುಧೀಂದ್ರ ಅಧ್ಯಕ್ಷತೆ ವಹಿಸಿದ್ದರು.