ಸೊರಬ: ಉತ್ತಮ ಸಮಾಜದ ನಿರ್ಮಾಣಕ್ಕೆ ಪತ್ರಿಕೆಗಳ ಪಾತ್ರ ಮಹತ್ವದಾಗಿದೆ. ಈ ನಿಟ್ಟಿನಲ್ಲಿ ಓದುಗರು ಸಮಾಜಕ್ಕೆ ಪೂರಕವಾದ ಚಿಂತನೆ ಬೆಳೆಸಿಕೊಳ್ಳುವ ಮೂಲಕ ಪತ್ರಿಕೆಗಳ ಬೆಳವಣಿಗೆಗೆ ಸಹಕಾರ ನೀಡುವುದು ಅಗತ್ಯ ಎಂದು ತಹಸೀಲ್ದಾರ್ ಹುಸೇನ್ ಸರಕಾವಸ್ ಹೇಳಿದರು.
ಶನಿವಾರ ಪಟ್ಟಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರರ್ಕರ ಸಂಘದ ಸೊರಬ ಶಾಖೆ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪತ್ರಿಕೆಗಳನ್ನು ನಿರಂತರ ಓದುವುದರಿಂದ ಸಮಗ್ರ ಜ್ಞಾನ ಪಡೆಯಲು ಅನುಕೂಲವಾಗುತ್ತದೆ. ಜನತೆ ಪತ್ರಿಕೆಗಳಲ್ಲಿನ ಒಳ್ಳೆಯ ವಿಷಯಗಳ ಗ್ರಹಿಸಿ ಮೈಗೂಡಿಸಿಕೊಳ್ಳುವ ಮೂಲಕ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು. ಪ್ರತಿ ನಿತ್ಯ ಪತ್ರಿಕೆಗಳನ್ನು ಓದುವುದರಿಂದ ವೈಜ್ಞಾನಿಕ ಚಿಂತನೆ ಮೂಡುವುದರ ಜತೆಗೆ ವ್ಯಕ್ತಿಯ ಬೆಳವಣಿಗೆ ಸಾಧ್ಯ ಎಂದರು.
ಸಂಘದ ರಾಜ್ಯ ನಿರ್ದೇಶಕ ಎನ್.ರವಿಕುಮಾರ್ ಮಾಧ್ಯಮ ಮತ್ತು ಪ್ರಸ್ತುತ ಪತ್ರಕರ್ತರ ಸವಾಲುಗಳು ಕುರಿತು ವಿಶೇಷ ಉಪನ್ಯಾಸ ನೀಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶ ಸುಗಮವಾಗಿ ಸಾಗಲು ಮಾಧ್ಯಮದ ಪಾತ್ರ ಮಹತ್ವದ್ದಾಗಿದ್ದು. ಈ ನಿಟ್ಟಿನಲ್ಲಿ ಪತ್ರಕರ್ತರ ಜವಾಬ್ದಾರಿ ಸಹ ಹೆಚ್ಚಿದೆ ಎಂದು ಹೇಳಿದರು.
ಡಾ.ಬಿ.ಸಿ. ರಾಯ್ ಪ್ರಶಸ್ತಿ ಪುರಸ್ಕೃತ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ವೈದ್ಯ ಡಾ. ನಾಗೇಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪತ್ರಕರ್ತ ದತ್ತ ಸೊರಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ತಾಲೂಕು ಅಧ್ಯಕ್ಷ ಜೆ.ಎಸ್. ನಾಗರಾಜ ಜೈನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷರಾದ ವೈದ್ಯ, ಕೆ.ಎಸ್.ಹುಚ್ಚರಾಯಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭು ಕೆ.ಸಾಹುಕಾರ್, ಸಿಪಿಐ ಎಲ್.ರಾಜಶೇಖರ್ ಇತರರಿದ್ದರು.ರವಿ ಎ.ಕಲ್ಲಂಬಿ ನಿರೂಪಿಸಿದರು. ಜಿ.ಎಂ. ತೋಟಪ್ಪ ಸ್ವಾಗತಿಸಿದರು. ರಾಘವೇಂದ್ರ ಬಾಪಟ್ ವಂದಿಸಿದರು.