ನವದೆಹಲಿ: ಅವರು ಕರೊನಾದಿಂದಾಗಿ ಸತ್ತ 200ಕ್ಕೂಅಧಿಕ ಮಂದಿಯ ಶವಗಳನ್ನು ತನ್ನ ಆಂಬುಲೆನ್ಸ್ನಲ್ಲಿ ಸಾಗಿಸಿದ್ದರು. ಆರು ತಿಂಗಳ ಕಾಲ ಮನೆಯಿಂದ ದೂರವಿದ್ದು ಕರೊನಾ ವಾರಿಯರ್ ಆಗಿ ಶ್ರಮಿಸಿದ್ದರು. ದುರದೃಷ್ಟವಶಾತ್ ಕೊನೆಗೆ ಕರೊನಾಗೇ ಬಲಿಯಾದರು!
ಹೀಗೆ ಕರೊನಾಗೆ ಬಲಿಯಾದ ಆಂಬುಲೆನ್ಸ್ ಚಾಲಕರ ಹೆಸರು ಆರಿಫ್ ಖಾನ್. ದೆಹಲಿಯ ಶಹೀದ್ ಭಗತ್ ಸಿಂಗ್ ಸೇವಾ ದಳ ಎಂಬ ಎನ್ಜಿಒಗೆ ಸೇರಿದ್ದ ಆಂಬುಲೆನ್ಸ್ ಚಲಾಯಿಸುತ್ತಿದ್ದ ಖಾನ್, ಕಳೆದ ಆರು ತಿಂಗಳಿಂದ ತನ್ನ ಮನೆಯಿಂದ 28 ಕಿ.ಮೀ. ದೂರದಲ್ಲಿದ್ದ ಆಂಬುಲೆನ್ಸ್ ಪಾರ್ಕಿಂಗ್ ಲಾಟ್ನಲ್ಲೇ ಬಹುತೇಕ ಕಾಲ ಕಳೆದಿದ್ದರು. ಹೀಗೆ 200ಕ್ಕೂ ಅಧಿಕ ಕೋವಿಡ್ ರೋಗಿಗಳ ಶವಗಳನ್ನು ಸಾಗಿಸಿ, ಅಂತ್ಯಸಂಸ್ಕಾರಕ್ಕೆ ನೆರವಾಗಿದ್ದ, ಖಾನ್ ಅ. 3ರಂದು ಅನಾರೋಗ್ಯಕ್ಕೀಡಾಗಿದ್ದರು. ನಂತರ ಕರೊನಾ ಸೋಂಕು ದೃಢಪಟ್ಟಿತ್ತು. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ದೆಹಲಿಯ ಹಿಂದೂ ರಾವ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಖಾನ್ ಒಬ್ಬರೇ ಮನೆಯ ಜೀವನಾಧಾರವಾಗಿದ್ದರು. ಬರುತ್ತಿದ್ದ 16 ಸಾವಿರ ರೂ. ಸಂಬಳದಲ್ಲಿ 9 ಸಾವಿರ ರೂ. ಮನೆ ಬಾಡಿಗೆಗೇ ಖರ್ಚಾಗುತ್ತಿತ್ತು ಎನ್ನಲಾಗಿದೆ.
ಬಿಜೆಪಿ ಮಾಜಿ ಶಾಸಕ ಜಿತೇಂದ್ರ ಸಿಂಗ್ ಶುಂಠಿ ಈ ಎನ್ಜಿಒ ನಡೆಸುತ್ತಿದ್ದು, ಖಾನ್ ನಿಧನದಿಂದ ಇತರ ಚಾಲಕರ ನೈತಿಕ ಸ್ಥೈರ್ಯ ಕುಸಿದಿದೆ ಎಂದಿದ್ದಾರೆ. ವಾರಸುದಾರರಿಲ್ಲದ ಶವಗಳನ್ನು ಹಲವು ವರ್ಷಗಳಿಂದ ಅಂತ್ಯಸಂಸ್ಕಾರ ಮಾಡಿಕೊಂಡು ಬರುತ್ತಿರುವ ಈ ಎನ್ಜಿಒ, ರಕ್ತದಾನ ಶಿಬಿರ ಜತೆಗೆ ಕೋವಿಡ್ ಸಮಯದಲ್ಲಿ ಕ್ವಾರಂಟೈನ್ ಕೆಲಸಗಾರರಿಗೆ ಲಂಗರ್ ಸೇವೆಯನ್ನು ನೀಡಿದೆ. (ಏಜೆನ್ಸೀಸ್)