More

    ಇದು ಕ್ಯಾಪ್ಟನ್ಸಿ ಅಂದ್ರೆ! ಪಂದ್ಯದ ನಡುವೆ ರೋಹಿತ್​ ಮಾಡಿದ ಮೋಡಿಗೆ ಹಾರ್ದಿಕ್​ ಕಕ್ಕಾಬಿಕ್ಕಿ, ನೋಡಿ ಕಲಿ ಅಂದ್ರು ಫಾನ್ಸ್

    ನವದೆಹಲಿ: ಮುಂಬೈ ಇಂಡಿಯನ್ಸ್‌ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ಪ್ರಸಕ್ತ ಐಪಿಎಲ್-2024 ಟೂರ್ನಿಯಲ್ಲಿ ಪದೇಪದೆ ಎಡವುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಗುಜರಾತ್​ ಟೈಟಾನ್ಸ್​ ವಿರುದ್ಧ ನಡೆದ ತನ್ನ ಮೊದಲ ಪಂದ್ಯದಲ್ಲಿ ಹಾರ್ದಿಕ್ ಬ್ಯಾಟಿಂಗ್, ಬೌಲಿಂಗ್ ಮತ್ತು ನಾಯಕತ್ವದಲ್ಲಿ ಸಂಪೂರ್ಣ ವಿಫಲರಾಗಿದ್ದರು. ಕಳಪೆ ನಾಯಕತ್ವದಿಂದಾಗಿ ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯ ಅಂತಿಮ ಹಂತದಲ್ಲಿ ಗುಜರಾತ್​ ಪಾಲಾಯಿತು. ಮುಂದಿನ ಪಂದ್ಯದಲ್ಲಾದರೂ ಹಾರ್ದಿಕ್​ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾರೆ ಅಂದ್ರೆ ಮತ್ತೆ ಅದನ್ನೇ ಮುಂದುವರಿಸಿದರು.

    ನಿನ್ನೆ (ಮಾರ್ಚ್​ 27) ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿಯೂ ಹಾರ್ದಿಕ್ ನಿಲುವು ಬದಲಾಗಲಿಲ್ಲ. ನಾಯಕತ್ವದ ಕೆಟ್ಟ ನಿರ್ಧಾರಗಳಿಂದ ಮುಂಬೈ ತಂಡಕ್ಕೆ ಮತ್ತೊಂದು ಸೋಲಿನ ಅನುಭವವಾಯಿತು. ಆದರೆ, ಲೆಜೆಂಡರಿ ರೋಹಿತ್ ಶರ್ಮ ಇದೇ ಸಂದರ್ಭದಲ್ಲಿ ತಾವೇ ಅತ್ಯುತ್ತಮ ಸಾಯಕ ಎಂಬುದನ್ನು ಸಾಬೀತುಪಡಿಸಿದರು. ಹಾರ್ದಿಕ್​ಗೆ ನಾಯಕತ್ವ ಎಂದರೆ ಏನೆಂದು ತೋರಿಸಿಕೊಟ್ಟರು.

    ಮುಂಬೈ ವಿರುದ್ಧದ ಪಂದ್ಯದಲ್ಲಿ ಎಸ್​ಆರ್​ಎಚ್​ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಬ್ಯಾಟಿಂಗ್​ನಲ್ಲಿ ಬೆಂಕಿಯ ಜ್ವಾಲೆಯಂತೆ ಸಿಡಿದರು. ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಒಟ್ಟು 24 ಎಸೆತಗಳನ್ನು ಎದುರಿಸಿದ ಹೆಡ್​ 62 ರನ್ ಗಳಿಸಿ, ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಔಟಾದರು. ಮುಂಬೈ ಬೌಲರ್‌ಗಳನ್ನು ಹೆಡ್​ ಮನಸೋ ಇಚ್ಛೆ ದಂಡಿಸಿದರು. ಹೆಡ್​ ಆಟದ ವೇಗವನ್ನು ನೋಡಿದಾಗ ಇನ್ನೂ ಎರಡು ಓವರ್​ ಕ್ರೀಸ್​ನಲ್ಲಿ ಇದ್ದಿದ್ದರೆ ಶತಕ ಸಿಡಿಸಿಬಿಡುತ್ತಿದ್ದರು.

    ಆದರೆ, ಈ ವೇಳೆ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ರೋಹಿತ್ ಶರ್ಮ ವಹಿಸಿಕೊಂಡರು. ಹೆಡ್‌ ವಿಕೆಟ್​ ಉರುಳಿಸಲು ಬಿಗಿ ಫೀಲ್ಡಿಂಗ್ ಸೆಟ್ ಮಾಡಿದರು. ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುವಂತೆ ಹಾರ್ದಿಕ್​ಗೆ ಸೂಚನೆ ನೀಡಿದರು. ಗೆರಾಲ್ಡ್​ ಕೋಟ್ಜಿಗೆ ಬೌಲ್ ಮಾಡಲು ಕೆಲ ಸಲಹೆ ನೀಡಿದರು. ಅದರಂತೆ ಕೋಟ್ಜಿ ಎಸೆದ ಬಾಲ್​ ಅನ್ನು ಬಲವಾಗಿ ಹೊಡೆಯಲು ಹೋಗಿ ನಮನ್​ ಧಿರ್​ಗೆ ಕ್ಯಾಚಿತ್ತು ನಿರ್ಗಮಿಸಿದರು.

    ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಹಾರ್ದಿಕ್​, ರೋಹಿತ್​ ರಣತಂತ್ರ ನೋಡಿ ಒಂದು ಕ್ಷಣ ಹುಬ್ಬೇರಿಸಿದರು. ರೋಹಿತ್​ ಅವರ ಸರಿಯಾದ ಅಂದಾಜು, ಸರಿಯಾದ ಯೋಜನೆ, ಬ್ಯಾಟರ್​ಗಳನ್ನು ಕೆರಳಿಸುವುದು ಮತ್ತು ಬೌಲರ್ಸ್​​ಗೆ ಆತ್ಮವಿಶ್ವಾಸ ತುಂಬಿದರೆ ವಿಕೆಟ್​ಗಳನ್ನು ಪಡೆಬಹುದು ಎಂಬ ರೋಹಿತ್​ ತಂತ್ರ ಒಂದು ಕ್ಷಣ ಹಾರ್ದಿಕ್​ ಮೈಂಡ್​ ಬ್ಲಾಕ್​ ಮಾಡಿತು. ತಂಡ ಸಂಕಷ್ಟದಲ್ಲಿದ್ದ ವೇಳೆ ರೋಹಿತ್​, ತನ್ನ ಜವಾಬ್ದಾರಿ ಮೆರೆದಿದ್ದನ್ನು ನೋಡಿ, ನೆಟ್ಟಿಗರು ರೋಹಿತ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡುತ್ತಿದ್ದಾರೆ.

    ಮುಂಬೈಗೆ 5 ಬಾರಿ ಐಪಿಎಲ್​ ಕಪ್ ಸುಮ್ಮನೇ ಬಂದಿಲ್ಲ. ನಾಯಕತ್ವ ಎಂದರೆ ಇದೇ ಎನ್ನುತ್ತಾರೆ. ಹಾರ್ದಿಕ್​, ರೋಹಿತ್​ನಿಂದ ಕಲಿಯಲಿ, ನಾಯಕ ಯಾವತ್ತಿದ್ದರೂ ನಾಯಕನೇ ಎಂದು ರೋಹಿತ್​ರನ್ನು ಹೊಗಳುತ್ತಿದ್ದು, ಹಾರ್ದಿಕ್​ರನ್ನು ಜುಜುಬಿ ಹೊಸ ನಾಯಕ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ರೋಹಿತ್​​ಗೆ ನಾಯಕತ್ವ ಹಸ್ತಾಂತರಿಸದಿದ್ದರೆ ಮುಂಬೈ ಚೇತರಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಹೇಳಲಾಗುತ್ತಿದೆ. ಅಂದಹಾಗೆ ರೋಹಿತ್ ನಾಯಕತ್ವದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.

    ಪಂದ್ಯದ ವಿಚಾರಕ್ಕೆ ಬಂದರೆ ಮೊದಲಿಗೆ ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 3 ವಿಕೆಟ್‌ ಕಳೆದುಕೊಂಡು 277 ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿತು. ಗೆಲ್ಲಲು 278 ರನ್‌ಗಳ ಕಠಿಣ ಗುರಿಯನ್ನು ಪಡೆದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 246 ರನ್‌ ಹೊಡೆದು ಸತತ ಎರಡನೇ ಸೋಲನ್ನು ಅನುಭವಿಸಿತು. (ಏಜೆನ್ಸೀಸ್​)

    ಮುಂಬೈ ವಿರುದ್ಧ ಹೈದರಾಬಾದ್​ಗೆ ಭರ್ಜರಿ ಜಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts